ADVERTISEMENT

ಕಣ್ಣಾಲಿ ತೇವಗೊಳಿಸಿದ ಕಿ.ರಂ. ನೆನಪುಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2013, 19:50 IST
Last Updated 10 ಮಾರ್ಚ್ 2013, 19:50 IST
ನಗರದಲ್ಲಿ ಭಾನುವಾರ ನಡೆದ ಕಿ.ರಂ. ನೆನಪಿನ ಕಾರ್ಯಕ್ರಮದಲ್ಲಿ ಎಂ.ಫಿಲ್ ಪದವಿ ಪಡೆದ ವಿದ್ಯಾರ್ಥಿಗಳ ಜೊತೆ ಬೆಂಗಳೂರು ನಗರ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್, ಜಾನಪದ ವಿದ್ವಾಂಸ ಡಾ. ನಲ್ಲೂರು ಪ್ರಸಾದ್, ಚಿಂತಕ ಶೂದ್ರ ಶ್ರೀನಿವಾಸ, ಕವಿ ಡಾ. ಸಿದ್ದಲಿಂಗಯ್ಯ, ವೈದ್ಯೆ ಡಾ.ಆರ್.ಕೆ. ಸರೋಜ, ವಿಮರ್ಶಕ ನಟರಾಜ್ ಹುಳಿಯಾರ್ ಮತ್ತು ಕೆಪಿಎಸ್‌ಸಿ ಸದಸ್ಯೆ ಡಾ. ಮಂಗಳಾ ಶ್ರೀಧರ್ ಛಾಯಾಚಿತ್ರ ತೆಗೆಸಿಕೊಂಡರು 	-ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ಕಿ.ರಂ. ನೆನಪಿನ ಕಾರ್ಯಕ್ರಮದಲ್ಲಿ ಎಂ.ಫಿಲ್ ಪದವಿ ಪಡೆದ ವಿದ್ಯಾರ್ಥಿಗಳ ಜೊತೆ ಬೆಂಗಳೂರು ನಗರ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್, ಜಾನಪದ ವಿದ್ವಾಂಸ ಡಾ. ನಲ್ಲೂರು ಪ್ರಸಾದ್, ಚಿಂತಕ ಶೂದ್ರ ಶ್ರೀನಿವಾಸ, ಕವಿ ಡಾ. ಸಿದ್ದಲಿಂಗಯ್ಯ, ವೈದ್ಯೆ ಡಾ.ಆರ್.ಕೆ. ಸರೋಜ, ವಿಮರ್ಶಕ ನಟರಾಜ್ ಹುಳಿಯಾರ್ ಮತ್ತು ಕೆಪಿಎಸ್‌ಸಿ ಸದಸ್ಯೆ ಡಾ. ಮಂಗಳಾ ಶ್ರೀಧರ್ ಛಾಯಾಚಿತ್ರ ತೆಗೆಸಿಕೊಂಡರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಮರ್ಶಕ ಕಿ.ರಂ. ನಾಗರಾಜ್ ನಿಡಿದಾಗಿ ಬಿಡುತ್ತಿದ್ದ ಸಿಗರೇಟ್ ಹೊಗೆಯಂತೆ ಅವರ ನೆನಪುಗಳು ಭಾನುವಾರ ವೇದಿಕೆ ಮೇಲೆ ಸುರುಳಿ- ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿದ್ದರೆ, ಸಭಾಂಗಣದಲ್ಲಿ ತುಂಬಿದ್ದ ಅವರ ಅಭಿಮಾನಿಗಳಿಗೆ ಅವುಗಳು ಒಮ್ಮೆ ಕಚಗುಳಿ ಇಡುತ್ತಿದ್ದವು. ಇನ್ನೊಮ್ಮೆ ಕಣ್ಣಾಲಿಗಳನ್ನು ತೇವಗೊಳಿಸುತ್ತಿದ್ದವು. ಮಗದೊಮ್ಮೆ ಗಂಭೀರ ಚಿಂತನೆಗೆ ಹಚ್ಚುತ್ತಿದ್ದವು.

ಕಾವ್ಯಮಂಡಲ ಸಂಸ್ಥೆ ಏರ್ಪಡಿಸಿದ್ದ `ಕಿ.ರಂ. ನೆನಪಿನ ಮಂಟೇ ದಿನ' ಕಾರ್ಯಕ್ರಮ ಅವರ ನೆನಪಿನ ಹೊನಲು ಉಕ್ಕಿ ಹರಿಯುವಂತೆ ಮಾಡಿತು. ನೆನಪಿನ ಮಾತುಗಳಿಗೆ ನಾಂದಿ ಹಾಡಿದ ಜಾನಪದ ವಿದ್ವಾಂಸ ಡಾ. ನಲ್ಲೂರು ಪ್ರಸಾದ್, `ಕಿ.ರಂ. ಸತ್ತಿಲ್ಲ ಕಣ್ರಿ. ಇಲ್ಲೇ ಸಿಗರೇಟ್ ಸೇದಲು ಹೋಗಿದ್ದಾರೆ' ಎಂದು ಭಾವುಕರಾದರು.

`ನಮ್ಮ ಕಿ.ರಂ. ಗುಂಡು ಹಾಕಿದಾಗಲೂ ಪಂಪನ ಕುರಿತು ಮಾತನಾಡುತ್ತಿದ್ದರು. ಸಾಹಿತ್ಯದ ಪಾಠ ಮಾಡುತ್ತಿದ್ದರು. ಛೇ, ಅಂತಹ ಗೆಳೆಯ, ಗುರು ಮತ್ತೆ ಸಿಗಲ್ಲ ಬಿಡ್ರಿ' ಎಂದು ನಿಟ್ಟುಸಿರುಬಿಟ್ಟರು. `ಸಾಹಿತ್ಯದಲ್ಲೂ ಚಕ್ರವರ್ತಿಯಾಗಿದ್ದ ಈ ಸತ್ಯವಂತನಿಗೆ ಸಾವಿಲ್ಲ' ಎಂದು ತಿಳಿಸಿದರು.

ವಿಮರ್ಶಕ ನಟರಾಜ್ ಹುಳಿಯಾರ್, `ಬಹು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಕಿ.ರಂ. ನಿರ್ಜಾತಿಗೆ ಸೇರಿದ್ದರು. ಓದುವ, ಗ್ರಹಿಸುವ ಕ್ರಮವನ್ನು ನಮಗೆಲ್ಲ ಕಲಿಸಿದ ಮಹಾಗುರು ಅವರು' ಎಂದು ನೆನೆದರು. `ಆಡುವ ಮಾತು ಹಾರುವುದು, ಮುದ್ರಿತ ಮಾತು ಕೊಳೆಯುವುದು' ಎಂಬ ನಂಬಿಕೆಯಲ್ಲಿದ್ದ ಕಿ.ರಂ. ಕೊನೆಗೂ ತಮ್ಮ ಕೃತಿಗಳನ್ನು ಮುದ್ರಿಸಲು ಒಪ್ಪಲಿಲ್ಲ' ಎಂದು ಹೇಳಿದರು.

ದಶಕಗಳ ಕಾಲದ ಗೆಳೆಯನನ್ನು ಆತ್ಮೀಯವಾಗಿ ಸ್ಮರಿಸಿಕೊಂಡ ಶೂದ್ರ ಶ್ರೀನಿವಾಸ, `ಕಿ.ರಂ. ಮತ್ತು ವಿಜಯಲಕ್ಷ್ಮಿ ಅವರ ಗುಟ್ಟಾದ ಪ್ರೇಮದ ಕುರಿತು ಅವರ ಶಿಷ್ಯರಾದ ನಾವೆಲ್ಲ ಸಿಕ್ಕಾಪಟ್ಟೆ ಮಾತಾಡಿಕೊಂಡು ರಟ್ಟು ಮಾಡಿದ್ದೆವು. ಅದೊಮ್ಮೆ ಕಿ.ರಂ. ಅವರಿಗೂ ಗೊತ್ತಾಗಿ ನಮ್ಮನ್ನೆಲ್ಲ ಕರೆದು ಗದರಿದ್ದರು' ಎಂದು ನಕ್ಕರು.

`ನನ್ನಂತಹ ಹಲವರ ಪಾಲಿಗೆ ಅವರೊಬ್ಬ ಗುಜರಿ ಸಾಮಾನುಗಳ ಮಾರ್ಗದರ್ಶಕ ಆಗಿದ್ದರು. ಸಂತೆಯ ಯಾವುದೋ ಮೂಲೆಗೆ ಕರೆದೊಯ್ದು, `ತಗೊ ಕಣಯ್ಯಾ, ಹಳೆ ಬೀಗಾನ; ಎಷ್ಟು ಜನ ಸುಂದರ ಹುಡುಗಿಯರ ಕೈಯಲ್ಲಿ ಆಡಿ ಬಂದಿದೆಯೋ' ಎನ್ನುತ್ತಿದ್ದರು. ಅವರ ಮಾತುಗಳು ಕಿವಿಯಲ್ಲಿ ಇನ್ನೂ ಗುಂಯ್‌ಗುಡುತ್ತಿವೆ' ಎಂದರು.

`ಕಿ.ರಂ.ಗೆ ಎಲ್ಲಿ ಒಳ್ಳೆಯ ಸಿಹಿ ತಿನಿಸು, ನಾನ್‌ವೆಜ್ ಊಟ ಸಿಗುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿತ್ತು. ಎಲ್ಲರನ್ನೂ ಕರೆದೊಯ್ದು ತಿನ್ನಿಸುತ್ತಿದ್ದರು. ಬಿಸ್ಮಿಲ್ಲಾ ಖಾನ್ ಅವರ ಸಂಗೀತದ ಕ್ಯಾಸೆಟ್‌ಅನ್ನು ವಾರಗಟ್ಟಲೆ ಹುಡುಕಾಡಿ ತಂದು ಕೇಳಿದ್ದೆವು. ನನ್ನ ಮನೆಯಲ್ಲಿ ಇರುವ ಅವರ ನೆನಪಿನ ಹಲವು ವಸ್ತುಗಳಲ್ಲಿ ಕಿ.ರಂ. ಜೀವಂತವಾಗಿದ್ದಾರೆ' ಎಂದು ಭಾವುಕರಾದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ. ಬಿ.ಎಂ. ಮಂಗಳಾ ಶ್ರೀಧರ್, `ಕಿ.ರಂ. ಮನೆ ಮುಂದೆ ಹಾಯ್ದು ಹೋಗುವಾಗಲೆಲ್ಲ. ಟವೆಲ್ ಸುತ್ತಿಕೊಂಡ ಮೇಷ್ಟ್ರು ತರಕಾರಿ ಖರೀದಿಗೆ ಬರುತ್ತಾರೇನೋ ಎಂಬ ನಿರೀಕ್ಷೆಯಲ್ಲಿ ಕಾಯುವ ಮನಸ್ಸಾಗುತ್ತದೆ. ನನ್ನ ಪಾಲಿಗೆ ಅವರ ಮನೆಯೇ ದೇವ ಮಂದಿರ' ಎಂದು ಹೇಳಿದರು.

ಡಾ.ಆರ್.ಕೆ. ಸರೋಜ ಕಾರ್ಯಕ್ರಮ ಉದ್ಘಾಟಿಸಿದರು. ಹಂಪಿ ಕನ್ನಡ ವಿ.ವಿ ಸಹಯೋಗದಲ್ಲಿ ಕಾವ್ಯಮಂಡಲದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಯಿತು. ಮಧ್ಯರಾತ್ರಿವರೆಗೆ ಮಂಟೇಸ್ವಾಮಿ ಹಾಗೂ ಮಲೆ ಮಾದೇಶ್ವರ ಕಾವ್ಯ ಗಾಯನ ನಡೆಯಿತು.

ಕಿ.ರಂ. ಹೇಳಿದ ಮಾರ್ಕ್ಸ್ ಕತೆ
ಕಾಲೇಜಿನಲ್ಲಿ ಪಾಠ ಮುಗಿಸಿಕೊಂಡು ಕಿ.ರಂ. ಆಫೀಸ್ ಕಡೆಗೆ ಹೋಗುವಾಗ ವಿದ್ಯಾರ್ಥಿಯೊಬ್ಬ ಬಂದು `ಸರ್ ಮಾರ್ಕ್ಸ್' ಎಂದು ಏನೋ ಹೇಳಲು ಹೊರಟಿದ್ದ. ಅಷ್ಟರಲ್ಲಿ ಕಿ.ರಂ. ಕಾರ್ಲ್ ಮಾರ್ಕ್ಸ್‌ನ ಇತಿಹಾಸವನ್ನೇ ಅವನ ಮುಂದೆ ತೆರೆದಿಟ್ಟರು. ಸಾವಧಾನವಾಗಿ ಎಲ್ಲವನ್ನೂ ಕೇಳಿಸಿಕೊಂಡ ಆ ಹುಡುಗ, ಕೊನೆಗೆ `ಸರ್, ನಾನು ಕೇಳಿದ್ದು ಪರೀಕ್ಷೆ ಮಾರ್ಕ್ಸ್ ಬಗೆಗೆ' ಎಂದ. ಕೋಪಗೊಂಡ ಮೇಷ್ಟ್ರು, `ತೊಲಗು ಇಲ್ಲಿಂದ, ಮತ್ತೆ ಕಂಡರೆ ಹುಷಾರ್' ಎಂದು ಗದರಿ ಕಳುಹಿಸಿದರು.

-ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಈ ನೆನಪು ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕಿ.ರಂ. ಅವರ ಮಾತುಗಳನ್ನು ದಾಖಲಿಸಲು ಇಬ್ಬರು ಕಿರಿಯ ಸಂಶೋಧಕರನ್ನು ನೇಮಿಸಲಾಗಿತ್ತು. ಕಿ.ರಂ. ಹೋದಲ್ಲಿ, ಬಂದಲ್ಲಿ ಇವರಿಬ್ಬರೂ ತಪ್ಪದೆ ಹೋಗುತ್ತಿದ್ದರು. ಕೊನೆಗೆ ಬಾರ್‌ಗೆ ಹೋದರೂ ಬಿಡಲಿಲ್ಲ. ಒಂದು ದಿನ ಕಿ.ರಂ. ಇಬ್ಬರನ್ನೂ ಕರೆದು `ಏನು ಬರೆದಿದ್ದೀರಿ ತನ್ನಿರಿ ನೋಡೋಣ' ಎಂದು ಪುಸ್ತಕ ಪಡೆದರು. ಅದನ್ನು ಪರ, ಪರ ಹರಿದು ಹಾಕಿದರು. ಇದು ಕಿ.ರಂ. ವ್ಯಕ್ತಿತ್ವ ಎಂದು ಸಿದ್ದಲಿಂಗಯ್ಯ ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.