ADVERTISEMENT

ಕನ್ನಡ ಭಾಷೆಗೇಕೆ ರಕ್ಷಣಾ ವೇದಿಕೆಗಳು?: ಅಗ್ರಹಾರ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:26 IST
Last Updated 10 ಡಿಸೆಂಬರ್ 2018, 20:26 IST
ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಅವರು ಅಗ್ರಹಾರ ಕೃಷ್ಣಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿದರು -ಪ್ರಜಾವಾಣಿ ಚಿತ್ರ
ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಅವರು ಅಗ್ರಹಾರ ಕೃಷ್ಣಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: 'ತಮಿಳು ಮತ್ತು ಮಲಯಾಳ ಭಾಷೆಗಳಿಗೆ ಇಲ್ಲದ ರಕ್ಷಣಾ ವೇದಿಕೆಗಳು ಕನ್ನಡ ಭಾಷೆಗೇಕಿವೆ' ಎಂದು ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಪ್ರಶ್ನಿಸಿದರು.

ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ ಆಯೋಜಿಸಿದ್ದ 'ಕನ್ನಡ ಮತ್ತು ಕನ್ನಡತನ' ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

‘ಭಾಷೆ ವಿನಾಶದ ಅಂಚಿಗೆ ಬಂದಾಗ ಆತಂಕ ಹೆಚ್ಚಾಗಿ ಭಾಷೆ ರಕ್ಷಿಸಿಕೊಳ್ಳುವ ಸಲುವಾಗಿ ರಕ್ಷಣಾ ವೇದಿಕೆಗಳು ಸೃಷ್ಟಿಯಾಗುತ್ತವೆ. ಆದರೆ, ಅವುಗಳು ಕನ್ನಡ ಭಾಷೆಯ ಅಸ್ಮಿತೆ ಕಾಪಾಡುವಲ್ಲಿ ವಿಫಲವಾಗಿವೆ. ವೇದಿಕೆಗಳಿದ್ದರೂ ಕನ್ನಡ ಕಣ್ಮರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

'ಏಕಭಾಷೆ ಮಿತಿಯನ್ನುಮೀರಿ ಹಲವು ಭಾಷೆಗಳನ್ನು ಸಕಾರಾತ್ಮಕವಾಗಿ ಮಾತನಾಡಲು ಕಲಿಯಬೇಕು. ಆಗ ಆ ಭಾಷೆಗಳ ಸಂಸ್ಕೃತಿ, ಪರಂಪರೆ,ವೈವಿಧ್ಯ ತಿಳಿಯುತ್ತೇವೆ. ಆದರೆ, ಕನ್ನಡತನ ಬಿಟ್ಟುಕೊಡದೆ ಅನ್ಯ ಭಾಷೆಗಳನ್ನು ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು. ಕನ್ನಡ ನಮ್ಮತನವನ್ನು ಗುರುತಿಸುವಂತಿರಬೇಕು' ಎಂದು ವಿವರಿಸಿದರು.

‘ಕನ್ನಡ ಬೆಳೆಸಿದ ಖ್ಯಾತಿ ಪಡೆದವರು ವಚನಕಾರರು. ಅವರು ಕನ್ನಡ ಶ್ಲೋಕಗಳಲ್ಲಿಯೇ ದೇವರ ಜೊತೆ ಮಾತನಾಡುತ್ತಿದ್ದರು. ಆಡು ಭಾಷೆಯಲ್ಲೇ ಇತರರೊಂದಿಗೆ ವ್ಯವಹರಿಸುತ್ತಿದ್ದರು. ಹಾಗೆಯೇ ಕುವೆಂಪು, ಬೇಂದ್ರೆ ಸೇರಿದಂತೆ ಹಲವರು ಕನ್ನಡ ಭಾಷೆಯನ್ನು ಉನ್ನತೀಕರಿಸಿದರು‌’ ಎಂದು ಹೇಳಿದರು.

ಉಪನ್ಯಾಸಕ್ಕೆಂದೇ ವಾರದಿಂದ ಸಂಪೂರ್ಣವಾಗಿ ಅಧ್ಯಯನ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ ನೋಟ್‌ ಪುಸ್ತಕವನ್ನು ಮರೆತು ಬಂದಿದ್ದೇನೆ. ಆ ಪುಸ್ತಕ ತಂದಿದ್ದರೆ ಇನ್ನೂ ಹೆಚ್ಚಿನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.