
ಬೆಂಗಳೂರು: `ಕಲೆ ಮತ್ತು ಸಂಸ್ಕೃತಿಯು ಕೇಂದ್ರೀಕರಣವಾಗದೆ ಎಲ್ಲೆಡೆ ಹರಡಬೇಕು' ಎಂದು ಸಾಹಿತಿ ಡಾ. ಎಸ್. ಜಿ.ಸಿದ್ದರಾಮಯ್ಯ ಹೇಳಿದರು.ರಂಗದರ್ಶನ ತಂಡವು ಸೋಮವಾರ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ಚಲನಚಿತ್ರ ನಟ ಲೋಕೇಶ್ ನೆನಪಿನ `ಕೆಂಪಾದವೊ ಎಲ್ಲ ಕೆಂಪಾದವೊ' ಬಡಾವಣೆ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸಾಂಸ್ಕೃತಿಕ ನಗರಿ ಎಂದರೆ ಬೆಂಗಳೂರು, ಸಂಸ್ಕೃತಿ, ಕಲೆಯೆಂದರೆ ರವೀಂದ್ರ ಕಲಾಕ್ಷೇತ್ರ ಎಂಬಂತಾಗಿದೆ. ಆದರೆ, ಕಲೆಯನ್ನು ಯಾವುದೇ ಒಂದು ನಗರ ಅಥವಾ ಒಂದು ಸ್ಥಳಕ್ಕೆ ಕೇಂದ್ರೀಕರಣಗೊಳಿಸಬಾರದು. ಕಲೆಯನ್ನು ವಿಕೇಂದ್ರೀಕರಣಗೊಳಿಸಬೇಕು' ಎಂದು ಅಭಿಪ್ರಾಯಪಟ್ಟರು.
`ಲಂಕೇಶ್ ನಿರ್ದೇಶಿಸಿದ ಎಲ್ಲ ಚಿತ್ರಗಳು ಪ್ರಯೋಗಾತ್ಮಕವಾಗಿದ್ದವು. ಅವರ ಚಿತ್ರದ ಕೆಂಪಾದವೋ ಹಾಡು ಚಲನಚಿತ್ರದ ಪೂರ್ಣ ಆಶಯವನ್ನು ವ್ಯಕ್ತಪಡಿಸುತ್ತಿತ್ತು. ಅದು ಇಡೀ ಚಿತ್ರದ ಚಿತ್ರರೂಪಕವಾಗಿತ್ತು' ಎಂದು ಹೇಳಿದರು.
`ಇಂದಿನ ಚಿತ್ರಗಳಲ್ಲಿ ಕೀಳು ಅಭಿರುಚಿ ಹೆಚ್ಚಾಗುತ್ತಿದೆ. ಕೆಟ್ಟ ಗೀತೆಗಳಿಗೆ ಇಂದು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಗೀತೆಗಳನ್ನು ವಿಕಾರಗೊಳಿಸುವವರಿಗೆ ಮಾನ್ಯತೆ ನೀಡಲಾಗುತ್ತಿದೆ. ಗೀತೆ ವಿಕಾರಗೊಳಿಸಿದವರನ್ನು ಒಳ್ಳೆಯ ಸಂಗೀತ ನಿರ್ದೇಶಕರು, ಗೀತೆ ರಚನಾಕಾರರು ಎಂದು ಕೊಂಡಾಡಲಾಗುತ್ತಿದೆ' ಎಂದು ವಿಷಾದಿಸಿದರು.
`ಇಂದಿನ ಯುವ ಪೀಳಿಗೆಯು ಹವ್ಯಾಸಿ ರಂಗ ಭೂಮಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ಹವ್ಯಾಸಿ ರಂಗಭೂಮಿಯು ಒಳ್ಳೆಯ ಗುಣಮಟ್ಟದಲ್ಲಿ ಬೆಳೆಯುತ್ತಿದೆ. ಇದು ಮುಂದಿನ ಭವಿಷ್ಯದ ಕುರಿತು ಆಶಾಕಿರಣವನ್ನು ಮೂಡಿಸಿದೆ' ಎಂದು ಅವರು ತಿಳಿಸಿದರು.
`ನಮ್ಮ ನಾಡಿನಲ್ಲಿ ಅನೇಕ ಕಲಾವಿದರಿಗೆ ಯಾವುದೇ ಮಾನ್ಯತೆಯು ದೊರೆಯುತ್ತಿಲ್ಲ. ಇದರಿಂದ, ಎಷ್ಟೋ ಒಳ್ಳೆಯ ಕಲಾವಿದರು ಬೇಲಿಯ ಮೇಲಿನ ಹೂವಿನಂತೆ ಅಲ್ಲೇ ಅರಳಿ ಬಾಡಿ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಅರ್ಹ ಕಲಾವಿದರಿಗೆ ಮಾನ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.
ಚಲನಚಿತ್ರ ನಿರ್ದೇಶಕ ರವೀಂದ್ರನಾಥ್ ಮಾತನಾಡಿ, `ಲೋಕೇಶ್ ಒಬ್ಬ ಭಾವನಾಜೀವಿ. ನಾನು ಕುಡುಕನಲ್ಲ, ಭಾವನೆಗಳ ತಿರುಕ ಎಂದು ಅವನೇ ಹಲವು ಬಾರಿ ಹೇಳಿಕೊಳ್ಳುತ್ತಿದ್ದ. ತಾನು ಅಳಿದ ನಂತರವೂ ತಾನು ಉಪಯೋಗವಾಗಬೇಕು ಎಂದು ಬಯಸಿ ತಮ್ಮ ದೇಹದಾನ ಮಾಡಿದ ಮಹಾನುಭಾವ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.