ADVERTISEMENT

ಕಸ ಸಂಸ್ಕರಣೆ: ತಜ್ಞರ ಸಮಿತಿಗೆ ಗಡುವು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 20:59 IST
Last Updated 13 ಡಿಸೆಂಬರ್ 2012, 20:59 IST

ಬೆಂಗಳೂರು: ವಿಲೇವಾರಿ ಘಟಕಗಳಲ್ಲಿ ಬಿದ್ದಿರುವ ತ್ಯಾಜ್ಯ ಸಂಸ್ಕರಣ ಕಾರ್ಯವನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ತಜ್ಞರ ಸಮಿತಿ 2 ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಕುಮಾರ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ನಡೆಸಿತು.

`ವಿಲೇವಾರಿ ಘಟಕಗಳಲ್ಲಿ ವಿಂಗಡಣೆ ಆಗದೆ ಬ್ದ್ದಿದ ತ್ಯಾಜ್ಯದ ಸಂಸ್ಕರಿಸಲು 36 ಕಂಪೆನಿ ಆಸಕ್ತಿ ತೋರಿವೆ. ಕಂಪೆನಿಗಳು ಸಲ್ಲಿಸಿದ ಅರ್ಜಿ ಪರಿಶೀಲನೆಯ ಹಂತದಲ್ಲಿದೆ' ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ತಜ್ಞರ ಸಮಿತಿ ರಚಿಸಿ ಸರ್ಕಾರ ಇದೇ 7ರಂದು ಆದೇಶ ಹೊರಡಿಸಿದೆ. ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ನಾತ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

`ಪ್ರತ್ಯೇಕ ನಿಗಾ ಇಡಿ': ಅಪಾರ್ಟ್‌ಮೆಂಟ್, ಮಾಲ್, ಹೋಟೆಲ್‌ಗಳಿಂದ ನಿತ್ಯ 1,900 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಎಂದು ಅರ್ಜಿದಾರ ಮೋಹನ್ ನ್ಯಾಯಪೀಠಕ್ಕೆ ತಿಳಿಸಿದರು.

`ಅಪಾರ್ಟ್‌ಮೆಂಟ್, ಮಾಲ್, ಹೋಟೆಲ್‌ಗಳಿಂದ ದೊಡ್ಡ ಪ್ರಮಾಣದ ತ್ಯಾಜ್ಯದ ವಿಲೇವಾರಿಯನ್ನು  ಬಿಬಿಎಂಪಿ  ಪ್ರತ್ಯೇಕವಾಗಿ ಗಮನಿಸಬೇಕು. ನಿಯಮ ಅನುಸಾರ ತ್ಯಾಜ್ಯ ವಿಂಗಡಣೆ, ವಿಲೇವಾರಿ ಮಾಡುವಂತೆ ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡದಿದ್ದರೆ, ತ್ಯಾಜ್ಯ ವಿಲೇವಾರಿಗೆ ವೆಚ್ಚವಾಗುವ ಹಣವನ್ನು ಅವುಗಳಿಂದಲೇ ವಸೂಲು ಮಾಡಬೇಕು' ಎಂದು ನ್ಯಾಯಪೀಠ ತಾಕೀತು ಮಾಡಿತು.

ವಾಣಿಜ್ಯ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಕುರಿತು ನಿಗಾ ಇಡಲು ಬಿಬಿಎಂಪಿ ಇನ್ನು 2 ದಿನಗಳಲ್ಲಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದೂ ಆದೇಶಿಸಿತು.

`ಪ್ರಚಾರಾಂದೋಲನ ನಡೆಸಿ': ತ್ಯಾಜ್ಯವನ್ನು ಮನೆಗಳಲ್ಲೇ ವಿಂಗಡಿಸುವ ಕಾರ್ಯ ಯಲಹಂಕ ವಲಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಆದರೆ ಇತರ ಪ್ರದೇಶಗಳಲ್ಲಿ ಅಷ್ಟು ಯಶಸ್ಸು ಕಂಡಿಲ್ಲ ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದರು. ಜನರಲ್ಲಿನ ಅರಿವಿನ ಕೊರತೆ ಕಾರಣ ಹೀಗಾಗುತ್ತಿದೆ ಎಂದ ನ್ಯಾಯಪೀಠ, `ತ್ಯಾಜ್ಯದ ವಿಂಗಡಣೆ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಲು ಪ್ರಚಾರಾಂದೋಲನ ಕೈಗೊಳ್ಳಬೇಕು' ಎಂದು ನಿರ್ದೇಶಿಸಿತು.

ಘಟಕ: ಘನ ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯ ಐವರು ಮುಖ್ಯ ಎಂಜಿನಿಯರ್‌ಗಳಿರುವ ಪ್ರತ್ಯೇಕ ಘಟಕ ಆರಂಭಿಸಲಾಗಿದೆ.  ತ್ಯಾಜ್ಯ ನಿರ್ವಹಣೆ  ಬಗ್ಗೆ ನಿತ್ಯ ನಿಗಾ ಇಡಲಾಗುತ್ತಿದೆ.  ದೂರು ದಾಖಲಿಸಲು 24 ಗಂಟೆ  ಕೆಲಸ ನಿರ್ವಹಿಸುವ ಘಟಕ ಆರಂಭಿಸಿದೆ ಎಂದು ಬಿಬಿಎಂಪಿ ತಿಳಿಸಿತು. ಜ.8ಕ್ಕೆ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.