ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ‘ಆರ್ಕಿಡ್ ದಿ ಇಂಟರ್ನ್ಯಾಷನಲ್ ಶಾಲೆ’ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಾನೂನು ಇಲಾಖೆ ಸಲಹೆ ಕೇಳಲಾಗಿದೆ. ಕಾನೂನು ಅಭಿಪ್ರಾಯ ಬಂದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಆರ್ಕಿಡ್ ಶಾಲೆಯ ಮಕ್ಕಳ ಪೋಷಕರೊಂದಿಗೆ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಅಭಿಪ್ರಾಯ ತಿಳಿಸಲು ಕಾನೂನು ಇಲಾಖೆಯು ಎರಡು ದಿನಗಳ ಕಾಲಾವಕಾಶ ನೀಡಿದೆ. ಶನಿವಾರ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಸಭೆ ಅಪೂರ್ಣ: ‘ಪೋಷಕರೊಂದಿಗಿನ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಶನಿವಾರದವರೆಗೆ ಅವಕಾಶ ಕೊಡಿ ಎಂದು ಅವರಲ್ಲಿ ಮನವಿ ಮಾಡಿದ್ದೇವೆ. ಪಾಲಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದರು. ‘ಶಾಲೆ ಆರಂಭವಾಗಿ ಈಗಾಗಲೇ ಮೂರು ನಾಲ್ಕು ತಿಂಗಳು ಕಳೆದಿರುವುದರಿಂದ ಕನಿಷ್ಠ ಪಕ್ಷ ಈ ಶೈಕ್ಷಣಿಕ ವರ್ಷದವರೆಗೂ ಶಾಲೆ ನಡೆಸಲು ಅನುಮತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಆದರೆ, ನಾನು ಪರಿಸ್ಥಿತಿಯನ್ನು ಪೋಷಕರಿಗೆ ವಿವರಿಸಿದ್ದೇನೆ. ಇರುವ ನಿಯಮಗಳನ್ನು ನಮಗೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದೇನೆ’ ಎಂದು ಹೇಳಿದರು.
ಪರ್ಯಾಯ ವ್ಯವಸ್ಥೆ: ಒಂದು ವೇಳೆ ಶಾಲೆಯನ್ನು ಮುಚ್ಚಬೇಕಾಗಿ ಬಂದರೆ, ಅಲ್ಲಿನ ಮಕ್ಕಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದೆ. ಆ ಶಾಲೆಯ ಸುತ್ತ ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪ್ರಯತ್ನಿಸಲಾಗುವುದು. ಮಕ್ಕಳನ್ನು ದಾಖಲಿಸಿಕೊಳ್ಳಲು ಕೆಲವು ಶಾಲೆಗಳು ಒಪ್ಪಿವೆ ಎಂಬ ಮಾಹಿತಿ ಇದೆ ಎಂದರು.
ಮನವಿ: ಸಭೆಯಲ್ಲಿ ಮಕ್ಕಳ ಪಾಲಕರು ಒಂದು ವರ್ಷ ಕಾಲ ಶಾಲೆಯನ್ನು ಮುಚ್ಚದಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪೋಷಕರ ವಿರೋಧ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರು, ‘ಮಕ್ಕಳನ್ನು ಈ ಶಾಲೆಗೆ ಸೇರಿಸುವುದಕ್ಕಾಗಿಯೇ ಬೇರೆ ಕಡೆಯಿಂದ ಬಂದು ಇಲ್ಲಿ ವಾಸಿಸುತ್ತಿದ್ದೇವೆ. ಈಗ ಏಕಾಏಕಿ ಶಾಲೆ ಮುಚ್ಚಿದರೆ, ಬೇರೊಂದು ಶಾಲೆಗೆ ಮಕ್ಕಳನ್ನು ದಾಖಲಿಸಲು ಕಷ್ಟವಾಗುತ್ತದೆ. ಹಾಗಾಗಿ ಈ ಒಂದು ವರ್ಷವಾದರೂ ಶಾಲೆಯನ್ನು ಮುಂದುವರಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದರು.
ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿರುವ ರಾಜ್ಯದ ಎಲ್ಲ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. 20 ದಿನಗಳ ಒಳಗೆ ಇಂತಹ ಶಾಲೆಗಳ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಂತಹ ಶಾಲೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
–ಸಚಿವ ಕಿಮ್ಮನೆ ರತ್ನಾಕರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.