ಹೊಸಕೋಟೆ: ಇಲ್ಲಿನ ಮಾಲೂರು ರಸ್ತೆಯಲ್ಲಿನ ಪ್ಲಾಸ್ಟಿಕ್ ಕಾರ್ಖಾನೆಯೊಂದರ ಶೆಡ್ನಲ್ಲಿ ಭಾನುವಾರ ರಾತ್ರಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಚ್ಚಾ ಸಾಮಗ್ರಿಗಳು, ಯಂತ್ರಗಳು ಸುಟ್ಟು ಹೋಗಿವೆ.
ಶೆಡ್ನಲ್ಲಿ ಕ್ಯಾಂಡಲ್ಗಳನ್ನು ತಯಾರಿಸಲಾಗುತ್ತಿತ್ತು. ಮಧ್ಯರಾತ್ರಿಯ ನಂತರ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲಿದ್ದ ಕಾವಲುಗಾರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿದವು. ಅಗ್ನಿ ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಕಾರ್ಖಾನೆಯ ನಿರ್ದೇಶಕ ಹರಿಬಾಬು ಪೊಲೀಸರಿಗೆ ದೂರು ನೀಡಿದ್ದು, ಒಂದು ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೂತನ ಪದಾಧಿಕಾರಿಗಳು: ತಾಲ್ಲೂಕು ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾಗಿ ಎಸ್.ಬಿಂದುಸಾಗರ್ ದೀಕ್ಷಿತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತರೆ ಪದಾಧಿಕಾರಿಗಳಾಗಿ ಸಮೀರ್ ಜಯತೀರ್ಥ (ಉಪಾಧ್ಯಕ್ಷ), ಜಿ.ಯು.ವಿಷ್ಣು (ಪ್ರಧಾನ ಕಾರ್ಯದರ್ಶಿ), ಕಾರ್ತಿಕ್ ಅಯ್ಯರ್, ಸುಮಂತ್ ಜಯತೀರ್ಥ (ಸಹ ಕಾರ್ಯದರ್ಶಿಗಳು), ಪಿ.ರವಿಶಂಕರ್, ಪವನ್ ಜಮದಗ್ನಿ (ಸಂಘಟನಾ ಕಾರ್ಯದರ್ಶಿಗಳು), ಜಯಂತ್ ವಿಠಲ್, ಸಿ.ಶ್ರೀನಿಧಿ (ಸಂಚಾಲಕರು) ಹಾಗೂ ಎಚ್.ಎ.ಸುಖೇಶ್ (ಖಜಾಂಚಿ) ಆಯ್ಕೆಯಾಗಿದ್ದಾರೆ ಎಂದು ಆರಾಧನಾ ಸಮಿತಿ ಅಧ್ಯಕ್ಷ ಟಿ.ಕೆ.ಶಾಮಸುಂದರ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಬಲ: ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸೆನೆಟ್ ಸದಸ್ಯೆ ಕೆ.ಎನ್.ಲಕ್ಷ್ಮಿ ಅವರಿಗೆ ಡಿವೈಎಫ್ಐ ತಾಲ್ಲೂಕು ಶಾಖೆ ಬೆಂಬಲ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.