ADVERTISEMENT

ಕಿದ್ವಾಯಿ ಆಸ್ಪತ್ರೆಗೆ ಎಸ್‌ಬಿಎಂ ನೆರವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಸ್ಥೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ `ಕಂಪೆನಿಯ ಸಾಮಾಜಿಕ ಹೊಣೆಗಾರಿಕೆ' (ಸಿಎಸ್‌ಆರ್) ಚಟುವಟಿಕೆ ಅಡಿ, `ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ'ಯಲ್ಲಿ `ಎಸ್‌ಬಿಎಂ ಶತಮಾನೋತ್ಸವ ಮಕ್ಕಳ ವಾರ್ಡ್' ಸ್ಥಾಪನೆಗೆ ರೂ.1.35 ಕೋಟಿ ಸಹಾಯಧನ ನೀಡಿದೆ.

ನಗರದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಬಿಎಂ ಅಧ್ಯಕ್ಷ ಪ್ರತಿಪ್ ಚೌಧರಿ ಅವರು ಸಹಾಯಧನದ ಚೆಕ್ ಅನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಮತ್ತು ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ವಿಜಯ್‌ಕುಮಾರ್ ಅವರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆಯಲ್ಲಿನ ವಿವಿಧ ಬಗೆಯ ಅಂಗವೈಕಲ್ಯ ಹೊಂದಿರುವ ಮಕ್ಕಳಿಗಾಗಿ ಹದಿನೈದು ಗಾಲಿ ಖುರ್ಚಿಗಳನ್ನು ನೀಡಲಾಯಿತು. ಅಲ್ಲದೆ ಶಿವನಹಳ್ಳಿಯಲ್ಲಿರುವ ಸ್ವಾಮಿ ಹರ್ಷಾನಂದಜೀ ಅವರ ರಾಮಕೃಷ್ಣ ಮಿಷನ್ ನಡೆಸುತ್ತಿರುವ ಶಾಲೆಗೆ ಗ್ರಾಮೀಣ ಭಾಗದಿಂದ ಮಕ್ಕಳನ್ನು ಕರೆತರಲು 24 ಆಸನಗಳನ್ನು ಹೊಂದಿರುವ ಮಿನಿ ಬಸ್‌ನ್ನು ನೀಡಲಾಯಿತು.

ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, `ಬ್ಯಾಂಕು ತನ್ನ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಬ್ಯಾಂಕಿನ ವಿವಿಧ ಶಾಖೆಗಳ ಮೂಲಕ ರಾಜ್ಯದ ವಿವಿಧ ಶಾಲೆಗಳಿಗೆ 7,800 ಫ್ಯಾನ್‌ಗಳನ್ನು ನೀಡಲಾಗಿದೆ. ಕಳೆದ ವರ್ಷ ನೀರು ಶುದ್ಧೀಕರಣ ಯಂತ್ರಗಳನ್ನು ನೀಡಲಾಗಿತ್ತು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.