ಬೆಂಗಳೂರು: ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಗೆ ವೇಲ್ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಸಮೀಪದ ಮೀನಾಕ್ಷಿಲೇಔಟ್ನಲ್ಲಿ ಗುರುವಾರ ನಡೆದಿದೆ.
ತಮಿಳುನಾಡು ಮೂಲದ ಕಂಗರಾಜ್ ಅವರ ಪತ್ನಿ ಕಲೈವಾಣಿ (48) ಮೃತಪಟ್ಟವರು. ಕಸವನಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿರುವ ಕಂಗರಾಜ್ ಅಂಗಡಿಗೆ ಹೋದಾಗ ಈ ಘಟನೆ ನಡೆದಿದೆ.
ದಂಪತಿ ತನ್ನ ಎರಡನೇ ಮಗ ಕಾರ್ತಿಕೇಯನ್ ಮತ್ತು ಸೊಸೆ ಹೇಮಾವತಿ ಜತೆ ವಾಸವಾಗಿದ್ದಾರೆ. ಇತ್ತೀಚೆಗಷ್ಟೆ ಮದುವೆಯಾಗಿದ್ದ ಮಗಳು ಸಂಪಂಗಿರಾಮನಗರಲ್ಲಿ ವಾಸವಾಗಿದ್ದಾರೆ. ಮೊದಲ ಮಗ ಚೆನ್ನೈನಲ್ಲಿ ಎಂಜಿನಿಯರ್ ಓದುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
`ಗರ್ಭಿಣಿಯಾದ ಹೇಮಾವತಿ ರಾಜಾಜಿನಗರಲ್ಲಿರುವ ತಾಯಿ ಮನೆಗೆ ಹೋಗಿದ್ದಾಳೆ. ಕೆಲಸದ ನಿಮಿತ್ತ ಹೊರ ಹೋಗಿದ್ದ ನಾನು ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ತಾಯಿಯನ್ನು ಕೂಗಿದರು ಆಕೆ ಪ್ರತಿಕ್ರಿಯೆ ನೀಡಲಿಲ್ಲ. ಒಳಗೆ ಹೋಗಿ ನೋಡಿದಾಗ ತಾಯಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಲಾಗಿತ್ತು.
ದುಷ್ಕರ್ಮಿಗಳು ಅವರ ಬಾಯಿಗೆ ಬಟ್ಟೆ ತುರುಕಿದ್ದರು. ವೇಲ್ನಿಂದ ಕುತ್ತಿಗೆಗೆ ಬಿಗಿದಿದ್ದರು. ಕೂಡಲೇ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು~ ಎಂದು ಕಾರ್ತಿಕೇಯನ್ ತಿಳಿಸಿದರು.
`ಕಲೈವಾಣಿ ಅವರು ಮೂರ್ಛೆ ರೋಗ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದಕ್ಕೆ ಯಾವುದೇ ಕುರುಹುಗಳು ಇಲ್ಲ. ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರಿಂದ ಆಘಾತ ಉಂಟಾಗಿ ಹೃದಯಘಾತದಿಂದ ಸಾವನ್ನಪ್ಪಿರಬಹುದು. ಮರಣೋತ್ತರ ಪರೀಕ್ಷೆ ನಂತರವಷ್ಟೆ ಸಾವಿಗೆ ಕಾರಣ ತಿಳಿಯಲಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.
ಕಲೈಮಣಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವಾಗಿದೆ ಎಂದು ತಿಳಿದು ಬಂದಿದೆ. ಪರಿಚಿತರೇ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.