ADVERTISEMENT

‘ಕುವೆಂಪು, ದೇಜಗೌ ಒಂದು ಶಕ್ತಿಯ ಎರಡು ಮುಖ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:43 IST
Last Updated 26 ಮಾರ್ಚ್ 2018, 19:43 IST

ಬೆಂಗಳೂರು: ಕುವೆಂಪು ಮತ್ತು ದೇ.ಜವರೇಗೌಡ ಒಂದೇ ಶಕ್ತಿಯ ಎರಡು ಮುಖಗಳು. ಅವರನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಕುವೆಂಪು ಕಲಾನಿಕೇತನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕುವೆಂಪು ಮತ್ತು ದೇಜಗೌ ಗುರು-ಶಿಷ್ಯರ ನೆನಪಿನ ಕಾರ್ಯಕ್ರಮ’ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಕನ್ನಡದ ಹೆಸರನ್ನು ಬಳಸಿಕೊಳ್ಳುವ ಸುಖಪುರುಷರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ, ಕುವೆಂಪು ಕನ್ನಡದ ಯುಗಪುರುಷರಾದರೆ ದೇಜಗೌ ಶಕಪುರುಷರು’ ಎಂದರು.

ADVERTISEMENT

‘ಕುವೆಂಪು ಇಂಗ್ಲಿಷ್‌ ಮೂಲಕ ಕನ್ನಡ ಪ್ರವೇಶಿಸಿದರೆ, ದೇಜಗೌ ಕನ್ನಡತನದಿಂದ ಭಾಷೆಯನ್ನು ಸಮೃದ್ಧವಾಗಿ ಕಟ್ಟಿದರು. ಈ ಇಬ್ಬರೂ ಸೀಮಾತೀತರು’ ಎಂದರು.

‘ಸಾಹಿತ್ಯ, ಸಂಸ್ಕೃತಿ ಮತ್ತು ಜನಪದ ಕ್ಷೇತ್ರಗಳಿಗೆ ದೇಜಗೌ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕುವೆಂಪು ಒಂದೆಡೆ ಕುಳಿತು ಸ್ಥಾಯಿಯಾಗಿ ಸಾಹಿತ್ಯ ಕೃಷಿ ಮಾಡಿದರೆ, ದೇಜಗೌನಾಡು ಸುತ್ತುತ್ತಲೇ ಜಂಗಮನಂತೆ ಕನ್ನಡ ಕಟ್ಟಿದರು’ ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಡಾ. ಮಳಲಿ ವಸಂತಕುಮಾರ್, ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ. ಪ್ರಕಾಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.