ADVERTISEMENT

ಕೆಂಗೇರಿ ಬಳಿ ಬೈಕ್‌ಗೆ ಬಸ್ ಡಿಕ್ಕಿ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಬೆಂಗಳೂರು: ಕೆಂಗೇರಿ ಮುಖ್ಯರಸ್ತೆ­ಯಲ್ಲಿ ಗುರುವಾರ ಮಧ್ಯಾಹ್ನ ಖಾಸಗಿ ಬಸ್ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಕೋಲ್ಕತ್ತಾ ಮೂಲದ ಪಿಂಟು ಕೋಲೆ (37) ಎಂಬುವರು ಮೃತಪಟ್ಟಿದ್ದಾರೆ.

ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯ ಲ್ಲಿರುವ ಸ್ನೇಹಿತ ಟ್ರಿಸಿಟ್‌ ದತ್ತ ಅವರನ್ನು ಭೇಟಿ ಯಾಗಲು ನಗರಕ್ಕೆ ಬಂದಿದ್ದ ಪಿಂಟು, ಶುಕ್ರವಾರ ವಾಪಸ್ ಹೋಗಲು ಟಿಕೆಟ್‌ ಕೂಡ ಕಾಯ್ದಿರಿಸಿದ್ದರು. ಸೀರೆ ವ್ಯಾಪಾರಿಯಾದ ದತ್ತ, ಮಧ್ಯಾಹ್ನ 2.20ರ ಸುಮಾರಿಗೆ ಪಿಂಟು ಅವರನ್ನು ಬೈಕ್‌ನಲ್ಲಿ ಕರೆದು ಕೊಂಡು ಸಿಟಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದರು. ಕೆಂಗೇರಿ ಮುಖ್ಯರಸ್ತೆ ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದ ಉದಯರಂಗ ಬಸ್ ಅವರಿಗೆ ಡಿಕ್ಕಿ ಹೊಡೆ ಯಿತು ಎಂದು ಪೊಲೀಸರು ಹೇಳಿದ್ದಾರೆ.

ಈ ವೇಳೆ ದತ್ತ ರಸ್ತೆಯ ಎಡಭಾಗಕ್ಕೆ ಉರುಳಿ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ, ಹಿಂಬದಿ ಕುಳಿತಿದ್ದ ಪಿಂಟು ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ ಚಾಲಕ ರಾಜಣ್ಣ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣ: ಬೊಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಾಜೇಶ್ ವೆಂಕಮ್ (26) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ.

ಮಡಿವಾ ಳದಲ್ಲಿರುವ ಸಾಫ್ಟ್‌ವೇರ್‌ ಕಂಪೆನಿಯೊಂ ದರಲ್ಲಿ ಎಂಜಿನಿಯರ್‌ ಆಗಿದ್ದ ಅವರು, ಗಾರ್ವೇ ಬಾವಿಪಾಳ್ಯ ಸಮೀಪದ ಮುನಿರೆಡ್ಡಿಲೇಟ್‌ನಲ್ಲಿ ವಾಸ ವಾಗಿದ್ದರು. ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಕಂಪೆನಿ ಬಳಿ ಬಂದ ಅವರು ರಸ್ತೆ ದಾಟಲು ಮುಂದಾದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಡಿವಾಳ ಸಂಚಾರ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.