ಕೆಂಗೇರಿ: `ನಗರ ಬೆಳೆದಂತೆಲ್ಲಾ ನೀರಿನ ತೊಂದರೆ ಉಂಟಾಗುತ್ತದೆ ಎಂದು ಕೆಂಪೇಗೌಡರು ಕೆರೆಗಳನ್ನು ನಿರ್ಮಿಸಿದ್ದರು. ಇಂದು ಕೆರೆಗಳನ್ನು ನಾಶ ಮಾಡಿ ಕಲುಷಿತ ವಾತಾವರಣ ಸೃಷ್ಟಿಸಿ ಪ್ರಕೃತಿಯ ವಿರುದ್ಧವಾಗಿ ನಡೆದುಕೊಳ್ಳುವುದು ಅಪಾಯದ ಮುನ್ಸೂಚನೆ~ ಎಂದು ಪಟ್ಟನಾಯಕನಹಳ್ಳಿ ಸ್ಫಟಿಕ ಪುರಿ ಮಹಾಸಂಸ್ಥಾನ ಮಠದ ನಂಜಾವದೂತ ಮಹಾಸ್ವಾಮಿ ಹೇಳಿದರು.
ಹೊರ ವರ್ತುಲ ರಸ್ತೆಯ ಪಾಪರೆಡ್ಡಿಪಾಳ್ಯದ ಆಟದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಜ್ಞಾನ ಭಾರತಿ ವಾರ್ಡ್ ಮಟ್ಟದ ನಾಡಪ್ರಭು ಕೆಂಪೇಗೌಡರ 501 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
`ಕೆಂಪೇಗೌಡ ನಿರ್ಮಿಸಿದ ಕೆರೆಗಳು ನಗರದಲ್ಲಿ ಉಳಿದಿದ್ದರೆ ನೀರಿಗಾಗಿ ಇಷ್ಟೊಂದು ಹಾಹಾಕಾರ ಪಡುವ ಅಗತ್ಯವಿರಲಿಲ್ಲ. ಮುಂದಾಲೋಚನೆ ಇಲ್ಲದೇ ಹಣದ ಆಸೆಗೆ ಬಲಿಯಾಗಿ ನಗರದ ಪರಿಸರವನ್ನು ನಾಶ ಮಾಡಿ ಲಕ್ಷಾಂತರ ಜನಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ~ ಎಂದರು.
ಶಾಸಕ ಎಂ.ಶ್ರೀನಿವಾಸ್, ಉಪ ಮೇಯರ್ ಎಲ್.ಶ್ರೀನಿವಾಸ್, ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆ ಸದಸ್ಯ ಗೋವಿಂದರಾಜು ಹಾಜರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.