ADVERTISEMENT

‘ಕೋರ್ಟ್‌ಗಳ ವಿಳಂಬ ಧೋರಣೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ನಗರದಲ್ಲಿ ಗುರುವಾರ ‘ವಿವಿಧ ಸ್ವಯಂ ಸೇವಾ ಸಂಘಟನೆಗಳ ವೇದಿಕೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ (ಸೂಟ್ ಧರಿಸಿರುವವರು), ‘18ನೇ ಕರ್ನಾಟಕ ವಿಧಾನಸಭೆ ಚುನಾವಣೆ 2018 ಪರ್ಯಾಯ ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿದರು. (ಎಡದಿಂದ) ‘ದಕ್ಷ’ ಅಧ್ಯಕ್ಷ ಹರೀಶ್ ನರಸಪ್ಪ, ಐಸಾಕ್ ಸಂಸ್ಥೆಯ ನಿವೃತ್ತ ನಿರ್ದೇಶಕ ಆರ್.ಎಸ್.ದೇಶಪಾಂಡೆ ಮತ್ತು ಕೆ.ಎಸ್.ಸಿ.ಪಿ.ಸಿ.ಆರ್ ಮಾಜಿ ಅಧ್ಯಕ್ಷೆ ನೀನಾ ನಾಯಕ್ ಇದ್ದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಗುರುವಾರ ‘ವಿವಿಧ ಸ್ವಯಂ ಸೇವಾ ಸಂಘಟನೆಗಳ ವೇದಿಕೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ (ಸೂಟ್ ಧರಿಸಿರುವವರು), ‘18ನೇ ಕರ್ನಾಟಕ ವಿಧಾನಸಭೆ ಚುನಾವಣೆ 2018 ಪರ್ಯಾಯ ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿದರು. (ಎಡದಿಂದ) ‘ದಕ್ಷ’ ಅಧ್ಯಕ್ಷ ಹರೀಶ್ ನರಸಪ್ಪ, ಐಸಾಕ್ ಸಂಸ್ಥೆಯ ನಿವೃತ್ತ ನಿರ್ದೇಶಕ ಆರ್.ಎಸ್.ದೇಶಪಾಂಡೆ ಮತ್ತು ಕೆ.ಎಸ್.ಸಿ.ಪಿ.ಸಿ.ಆರ್ ಮಾಜಿ ಅಧ್ಯಕ್ಷೆ ನೀನಾ ನಾಯಕ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯಲ್ಲಿ ವಿಳಂಬ ಧೋರಣೆ ಪ್ರದರ್ಶಿಸುವ ನ್ಯಾಯಾಲಯಗಳು ಅಂತಿಮವಾಗಿ ಮೃದುವಾದ ತೀರ್ಪು ನೀಡುವ ಮೂಲಕ ಪಿಐಎಲ್‌ ಸಲ್ಲಿಸುವವರ ಉತ್ಸಾಹ ಕುಗ್ಗಿಸುತ್ತವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಕೆಎಸ್‌ಸಿಪಿಸಿಆರ್‌)
ಮಾಜಿ ಅಧ್ಯಕ್ಷೆ ನೀನಾ ನಾಯಕ್‌ ವಿಷಾದಿಸಿದರು.

ವಿಧಾನಸಭಾ ಚುನಾವಣೆ–2018ರ ಅಂಗವಾಗಿ ಸ್ವಯಂ ಸೇವಾ ಸಂಸ್ಥೆಗಳ ’ಪರ್ಯಾಯ ಪ್ರಜಾ ಪ್ರಣಾಳಿಕೆ’ ಮಂಡನೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಉತ್ತಮ ಸಮಾಜ ನಿರ್ಮಾಣದ ಬಗ್ಗೆ ಅಧಿಕಾರಶಾಹಿ ವರ್ಗಕ್ಕೆ ಯಾವುದೇ ಚಿಂತನೆಗಳಿಲ್ಲ. ಸರ್ಕಾರ ರಚಿಸುವ ಆಯೋಗಗಳು ರಾಜಕೀಯ ನಾಯಕರ ತಾಣಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮುಂದು ಮಾಡಿಕೊಂಡು ಕೋರ್ಟ್‌ ಮೆಟ್ಟಿಲೇರಿದರೆ ಅಲ್ಲೂ ನಿರಾಶಾಭಾವ ಇದೆ’ ಎಂದರು.

‘ದಕ್ಷ’ ಸಂಸ್ಥೆಯ ಅಧ್ಯಕ್ಷ ಹರೀಶ್ ನರಸಪ್ಪ ಮಾತನಾಡಿ, ‘ರಾಜಕಾರಣಿಗಳಿಗೆ ಹೊಸ ಆಲೋಚನೆ. ಕೇವಲ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತಬೇಟೆಯ ರಾಜಕಾರಣ ಮಾಡುತ್ತಾರೆ. ಆದ್ದರಿಂದ ರಾಜಕಾರಣವನ್ನು ಸಬಲೀಕರಣಗೊಳಿಸುವ ಬಹುದೊಡ್ಡ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ’ ಎಂದರು.‘

ADVERTISEMENT

‘ನಾಗರಿಕ ಸಮಾಜ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮಂಡಿಸುವ ಪರ್ಯಾಯ ಪ್ರಣಾಳಿಕೆ ಅನುಷ್ಠಾನದ ಬಗ್ಗೆ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ಪ್ರದರ್ಶಿಸುವ ಬದ್ಧತೆಯನ್ನು ಅಳೆಯಲು ಪ್ರತಿವರ್ಷ ಪ್ರಗತಿ ಪರಿಶೀಲನಾ ವರದಿ ಬಿಡುಗಡೆ ಮಾಡಬೇಕು’ ಎಂದು ಸಂಘಟಕರಲ್ಲಿ ಮನವಿ ಮಾಡಿದರು.

‘ಇಲ್ಲದೇ ಹೋದರೆ ಐದು ವರ್ಷಕ್ಕೊಮ್ಮೆ ಇಂತಹ ಪರ್ಯಾಯ ಪ್ರಣಾಳಿಕೆ ಬಿಡುಗಡೆ ಮಾಡುವುದರಲ್ಲಿ ಮತ್ತು ವೇದಿಕೆಗಳಲ್ಲಿ ಮಾತನಾಡುವುದರಿಂದ ಯಾವುದೇ ಅರ್ಥವಿಲ್ಲ’ ಎಂದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೃಥ್ವಿದತ್ತ ಚಂದ್ರಶೋಭಿ, ‘ಚೈಲ್ಡ್‌ ರೈಟ್ಸ್‌ ಟ್ರಸ್ಟ್‌’ ಮುಖ್ಯಸ್ಥ ಎನ್.ವಿ.ವಾಸುದೇವ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.