ಬೆಂಗಳೂರು: ‘ರಾಜ್ಯ ಸರ್ಕಾರ ಪಶ್ಚಿಮ ಘಟ್ಟದ ಗುಂಡ್ಯಾದಲ್ಲಿ ಕೈಗೊಂಡಿರುವ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಕೈಬಿಡಬೇಕು. ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿರುವ ನೀರನ್ನು ಬರಪೀಡಿತ ಮಧ್ಯ ಕರ್ನಾಟಕ ಜಿಲ್ಲೆಗಳ ನೀರಾವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಭಾರತೀಯ ರೈತ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸಿ. ನರಸಿಂಹಪ್ಪ ಸರ್ಕಾರಕ್ಕೆ ಮನವಿ ಮಾಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಸಿಗೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸುಮಾರು 43 ಟಿ.ಎಂ.ಸಿ ನೀರು ವಿದ್ಯುತ್ ಉತ್ಪಾದನೆಗೆ ಪೋಲಾಗುತ್ತಿದೆ. ಬದಲಾಗಿ ನೀರನ್ನು ಈ ಜಿಲ್ಲೆಗಳಿಗೆ ಸರಬರಾಜು ಮಾಡಿದರೆ ಕುಡಿಯುವ ನೀರಿನ ಸಮಸ್ಯೆಯಿಂದ ನಾಗರಿಕರು ಮುಕ್ತರಾಗುತ್ತಾರೆ ಎಂದು ಹೇಳಿದರು.
ಎತ್ತಿನಹಳ್ಳ ನದಿಯ ನೀರನ್ನು ಹೇಮಾವತಿ ಜಲಾಶಯಕ್ಕೆ ಶೇಖರಣೆ ಮಾಡಬೇಕು. ಈ ಜಲಾಶಯದಿಂದ ತುಮಕೂರಿನ ಕೆಲ ಪ್ರದೇಶಗಳಿಗೆ ಈಗಾಗಲೇ ನೀರು ಪೂರೈಕೆಯಾಗುತ್ತಿದೆ. ಹೆಚ್ಚುವರಿ ನೀರು ಜಲಾಶಯದಲ್ಲಿ ಸಂಗ್ರವಾಗುವುದರಿಂದ ಕೋಲಾರ ಹಾಗೂ ಇತರ 5 ಜಿಲ್ಲೆಗಳ ಸುಮಾರು 20 ತಾಲ್ಲೂಕುಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ನೇತ್ರಾವತಿ ತಿರುವು ಪ್ರಸ್ತಾಪ ಬೇಡ: ಗುಂಡ್ಯಾ ಯೋಜನೆ ಹಾಗೂ ಎತ್ತಿನಹಳ್ಳ ಯೋಜನೆ ಪ್ರತ್ಯೇಕವಾಗಿದೆ. ಆದರೆ ಈ ಯೋಜನೆಗೆ ನೇತ್ರಾವತಿ ತಿರುವು ಯೋಜನೆ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಇಂತಹ ಅಸಂಬದ್ದ ಹೇಳಿಕೆಯು ಸ್ಥಳೀಯ ಜನತೆಯಲ್ಲಿ ಸಂಘರ್ಷ ಉಂಟುಮಾಡುತ್ತದೆ. ಹಾಗಾಗಿ ನೇತ್ರಾವತಿ ತಿರುವು ಯೋಜನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ವಷ್ಟಪಡಿಸಿದರು.
ಕನ್ನಡ ಗಂಗಾ ಯೋಜನೆ: ಈ ಯೋಜನೆಗೆ ಮುಖ್ಯಮಂತ್ರಿಗಳು ‘ಪಶ್ಚಿಮ ವಾಹಿನಿ’ಎಂಬ ಹೆಸರು ಸೂಚಿಸಿದ್ದಾರೆ.ಬದಲಾಗಿ ‘ಕನ್ನಡ ಗಂಗಾ’ ಹೆಸರನ್ನು ಈ ಯೋಜನೆಗೆ ನಾಮಕರಣ ಮಾಡಬೇಕು. ಬಜೆಟ್ನಲ್ಲಿ ವಿಷಯ ಪ್ರಸ್ತಾಪವಾಗಿದ್ದು ಶೀಘ್ರದಲ್ಲೇ ಯೋಜನೆ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ರೈತ ಒಕ್ಕೂಟದ ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.