ಬೆಂಗಳೂರು: ಖಾಸಗಿ ಪರಿಸರ ಪ್ರಯೋಗಾಲಯಗಳ ಗುಣಮಟ್ಟ ಮಾಪನ ಮಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಇದುವರೆಗೆ 50 ಪ್ರಯೋಗಾಲಯಗಳನ್ನು ನೋಂದಣಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ತಿಳಿಸಿದ್ದಾರೆ.
ನಗರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದ ನೋಂದಾಯಿತ ಪರಿಸರ ಪ್ರಯೋಗಾಲಯ ಪ್ರತಿನಿಧಿಗಳ ಸಮಾಲೋಚನಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪರಿಸರ ಪ್ರಯೋಗಾಲಯಗಳ ಪಾತ್ರ ಕೂಡ ಬಹಳ ಮಹತ್ವದ್ದು. ಈ ನಿಟ್ಟಿನಲ್ಲಿ ಪ್ರಯೋಗಾಲಯಗಳು ವಿಶ್ವದರ್ಜೆಯ ಗುಣಮಟ್ಟದ ಸೇವೆಯನ್ನು ಒದಗಿಸಬೇಕು~ ಎಂದು ಅವರು ಕೋರಿದರು.
`ಮಂಡಳಿಯಲ್ಲಿನ ಕೇಂದ್ರ ಪ್ರಯೋಗಾಲಯವನ್ನು ಕೂಡ ವಿಶ್ವ ದರ್ಜೆ ಮಟ್ಟಕ್ಕೇರಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆಯೇ, ಎಲ್ಲ ನೋಂದಾಯಿತ ಖಾಸಗಿ ಪರಿಸರ ಪ್ರಯೋಗಾಲಯಗಳು ಗುಣಮಟ್ಟ ಕಾಯ್ದುಕೊಳ್ಳಬೇಕು.
ಮಂಡಳಿ ವತಿಯಿಂದ ತರಬೇತಿ ಹಾಗೂ ಗುಣಮಟ್ಟ ನಿರ್ವಹಣೆಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು~ ಎಂದು ಅವರು ತಿಳಿಸಿದರು.
ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಂ. ಪುಟ್ಟಬುದ್ಧಿ, ಸದಸ್ಯ ಎಸ್.ಎಸ್. ಗದಗ್, ಮುಖ್ಯ ಪರಿಸರ ಅಧಿಕಾರಿ ಎಂ.ಡಿ.ಎನ್. ಸಿಂಹ, ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಬಿ.ಆರ್. ಬಾಲಗಂಗಾಧರ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಲಯ ಅಧಿಕಾರಿ ಎ. ಮನೋಹರನ್ ಹಾಗೂ ರಾಜ್ಯದ ಪರಿಸರ ಪ್ರಯೋಗಾಲಯಗಳ ಸಂಘದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.