ADVERTISEMENT

ಗುರುಭವನ : ಒಂದು ಕೋಟಿ ಅನುದಾನ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:45 IST
Last Updated 17 ಸೆಪ್ಟೆಂಬರ್ 2011, 19:45 IST

ಯಲಹಂಕ:  ಯಲಹಂಕದಲ್ಲಿ ಗುರುಭವನ ನಿರ್ಮಾಣ ಮಾಡಲು ಸರ್ಕಾರದಿಂದ ಒಂದು ಕೋಟಿ ಅನುದಾನ ಒದಗಿಸಲು ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಭರವಸೆ ನೀಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಂಗಳೂರು ಉತ್ತರ ವಲಯ-4 ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಇಲ್ಲಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ `ಗುರು ಸಮ್ಮಿಲನ~ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಶಿಕ್ಷಕರ ವೇತನದಲ್ಲಿ ಕೊಡುಗೆಯಾಗಿ ರೂ. 20 ಲಕ್ಷ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ 30 ಲಕ್ಷ ಅನುದಾನ ಸೇರಿದಂತೆ ಒಟ್ಟು ರೂ. 1.50 ಕೋಟಿ  ವೆಚ್ಚದಲ್ಲಿ ಸುಸಜ್ಜಿತವಾದ ಗುರುಭವನ ನಿರ್ಮಾಣ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು~ ಎಂದು ಅವರು ತಿಳಿಸಿದರು.

`ಶಾಲೆಗಳು ದೇಶದ ಉತ್ತಮ ಪ್ರಜೆಗಳನ್ನು ತಯಾರು ಮಾಡುವ ಕಾರ್ಖಾನೆಗಳಾಗಿದ್ದು, ಶಿಕ್ಷಕರು ಎಷ್ಟು ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದೇವೆ ಎಂಬುದಕ್ಕಿಂತ ಎಷ್ಟು ಜನ ಉತ್ತಮ ಮಕ್ಕಳನ್ನು ತಯಾರು ಮಾಡಿದ್ದೇವೆ ಎಂಬುದು ಮುಖ್ಯ~ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಕೃಷ್ಣಬೈರೇಗೌಡ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ಮೌಲ್ಯಗಳು ಅದಃಪತನದ ಅಂಚಿಗೆ ತಲುಪುತ್ತಿವೆ ಎಂದು ವಿಷಾಧಿಸಿದರು.

ಜಿ.ಪಂ.ಸದಸ್ಯೆ ವಾಣಿಶ್ರೀ ವಿಶ್ವನಾಥ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಜಯರಂಗ ಮಾತನಾಡಿದರು.

ಪ್ರಾಥಮಿಕ ಶಾಲಾ ವಿಭಾಗದ 25 ಮತ್ತು ಪ್ರೌಢಶಾಲಾ ವಿಭಾಗದ 14 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಪ್ರಾಥಮಿಕ ಶಾಲಾ ವಿಭಾಗದ 24 ಮತ್ತು ಪ್ರೌಢಶಾಲಾ ವಿಭಾಗದ 4 ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾ ನಿಸಲಾಯಿತು.

ಜಿ.ಪಂ.ಸದಸ್ಯರಾದ ಕೆ.ಅಶೋಕನ್, ಕೆ.ಎಂ.ಮಾರೇಗೌಡ,  ಶುಭ ನರಸಿಂಹಮೂರ್ತಿ, ತಾ.ಪಂ.ಅಧ್ಯಕ್ಷೆ ತ್ರಿವೇಣಿ ರಾಜಣ್ಣ, ಬಿಬಿಎಂಪಿ ಸದಸ್ಯರಾದ ಯಶೋಧಾ, ಮುನಿರಾಜು, ಶಿಕ್ಷಕರ ಸಂಘಗಳ ಪದಾಧಿಕಾರಿಗಳಾದ ಎಚ್.ಕೆ. ಮಂಜುನಾಥ್, ಚಂದ್ರೇಗೌಡ, ರಮಾದೇವಿ, ಭದ್ರಯ್ಯ, ಕೆ.ಎಸ್.ಗಿರೀಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.