ADVERTISEMENT

ಚಾಕು ತೋರಿಸಿ ಸುಲಿಗೆ, ಕಾರು ಅಪಹರಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:54 IST
Last Updated 1 ಜೂನ್ 2018, 19:54 IST

ಬೆಂಗಳೂರು: ಕೆಲಸ ಮುಗಿಸಿ ರಾತ್ರಿ 11.30ರ ಸುಮಾರಿಗೆ ಕಾರಿನಲ್ಲಿ ಮನೆಗೆ ಹೊರಟಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿಗಳು, ಚಾಕು ತೋರಿಸಿ ಸುಲಿಗೆ ಮಾಡಿ ಕಾರು ಅಪಹರಿಸಿದ ಪ್ರಕರಣ ಮಲ್ಲ‌ತ್ತಹಳ್ಳಿಯ ಮೈಲಾರಲಿಂಗೇಶ್ವರ ಟೆಂಟ್‌ಹೌಸ್ ಬಳಿ ನಡೆದಿದೆ.

ಈ ಬಗ್ಗೆ, ಹಲ್ಲೆಗೊಳಗಾಗಿರುವ ಚಿಕ್ಕಬಾಣಾವರದ ಅಬ್ಬಿಗೆರೆ ನಿವಾಸಿ ವೀರನಗೌಡ ಎಂಬುವರು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಇದೇ 28ರಂದು ರಾತ್ರಿ 11.30ರ ಸುಮಾರಿಗೆ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದೆ. ಮಾರ್ಗ ಮಧ್ಯೆ ಮೈಲಾರಲಿಂಗೇಶ್ವರ ಹಾಲೋಬ್ರಿಕ್ಸ್‌ ಮತ್ತು ಟೆಂಟ್‌ಹೌಸ್‌ ಪಕ್ಕದ ಮೋರಿಯ ಹತ್ತಿರ ಕಾರು ನಿಲ್ಲಿಸಿ, ಮೂತ್ರ ವಿಸರ್ಜನೆಗಾಗಿ ಕೆಳಗೆ ಇಳಿದಿದ್ದೆ’ ಎಂದು ವೀರನಗೌಡ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಅದೇ ಸಮಯಕ್ಕೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಗಳು ಚಾಕು ತೋರಿಸಿ, ಬೆದರಿಕೆಯೊಡ್ಡಿ ಪರ್ಸ್‌ನಲ್ಲಿದ್ದ ನಗದು, ಎಟಿಎಂ ಕಾರ್ಡ್‌,10 ಗ್ರಾಂ ಚಿನ್ನದ ಉಂಗುರ, ಮೊಬೈಲ್‌ ದೋಚಿದರು’ ಎಂದು ಅವರು ವಿವರಿಸಿದ್ದಾರೆ.

‘ಭಯಗೊಂಡಿದ್ದ ನಾನು ರಕ್ಷಣೆಗಾಗಿ ಕೂಗಿಕೊಂಡಾಗ ಅವರು ಚಾಕುವಿನಿಂದ ಬಲತೊಡೆಗೆ ಇರಿದು, ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗಿ, ನನ್ನನ್ನು ಕೆಳಗೆ ತಳ್ಳಿ ಕಾರು ಅಪಹರಿಸಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.