ಬೆಂಗಳೂರು: ವಿಶ್ವ ಗುಬ್ಬಚ್ಚಿಗಳ ದಿನದ ಅಂಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ನೇಚರ್ ಫಾರ್ ಎವರ್ ಸೊಸೈಟಿಯ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪ್ರತಿವರ್ಷ ಮಾರ್ಚ್ 20ರಂದು ‘ವಿಶ್ವ ಗುಬ್ಬಚ್ಚಿಗಳ ದಿನ’ ಆಚರಿಸಲಾಗುತ್ತದೆ. ಮನುಷ್ಯರ ಮಧ್ಯೆ ಬದುಕು ಕಟ್ಟಿಕೊಂಡಿರುವ ಗುಬ್ಬಚ್ಚಿಯು ನಗರೀಕರಣ, ಎಲ್ಲೆ ಮೀರಿದ ಮಾನವರ ಬದುಕಿನ ಶೈಲಿಯಿಂದ ಅವಸಾನದ ಅಂಚಿಗೆ ತಲುಪಿದೆ. ಅವುಗಳಿಗೆ ನೀರುಣಿಸುವುದು, ಗೂಡುಗಳನ್ನು ನಿರ್ಮಿಸುವುದು... ಹೀಗೆ ಅವುಗಳ ಸಂತತಿ ಹೆಚ್ಚು ಮಾಡಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಲಾಯಿತು.
‘ಹಕ್ಕಿಗಳ ಲೋಕದಲಿ ರೆಕ್ಕೆ ಮೂಡುವುದೆನಗೆ... ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳುಎಲ್ಲರನ್ನೂ ಕಾಡಬೇಕು. ಮನೆ ಮಾಳಿ
ಗೆಯ ಮೇಲೆ ಮಡಿಕೆ ನೀರು ಅವುಗಳಿಗೆ ಆಹ್ವಾನ ನೀಡುವಂತಾಗಬೇಕು. ಬೇಸಿಗೆ ಸಮಯದಲ್ಲಿ ಪಕ್ಷಿಗಳು ದಾಹ ನೀಗಿಸಿಕೊಳ್ಳಲು, ದೇಹವನ್ನು ತಂಪಾಗಿಸಲು ನಾವು ನೆರವಾಗಬೇಕು’ ಎಂದು ಅಭಿಯಾನದಲ್ಲಿ ತಿಳಿಸಲಾಯಿತು.
ಬಿಷಪ್ ಕಾಟನ್ ಮಹಿಳಾ ಕಾನೂನು ಕಾಲೇಜಿನ 40 ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನವೂ ನಡೆಯಿತು. ಇಲ್ಲಿನ ಬಿಳಿ ನವಿಲನ್ನು ಅವರು ದತ್ತು ಪಡೆದರು. ಜಾಗೃತಿ ಅಭಿಯಾನದ ಸಹಾಯದಿಂದ ಉದ್ಯಾನದಲ್ಲಿ ಕೆಲವು ಕೃತಕ ಗೂಡುಗಳನ್ನು ಅಳವಡಿಸಲಾಯಿತು. ಇದನ್ನು ನಿಯಮಿತವಾಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಉದ್ಯಾನದ ಕಾರ್ಯಕಾರಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.