
ಬೆಂಗಳೂರು: ವಾದ್ಯಗಳು ಬೇರೆ ಬೇರೆಯಾಗಿದ್ದರೂ ಹೊಮ್ಮುತ್ತಿದ್ದ ತಾಳದ ನಾದಕ್ಕೆ ಹೆಜ್ಜೆಯಾದ ಬುಡಕಟ್ಟು ಯುವಜನ. ವಿವಿಧ ಜನಪದ ವಾದ್ಯಗಳು ಮೇಳೈಸಿ ಸೃಷ್ಟಿಸಿದ ಕಲಾಲೋಕ. ಹಸಿರೆಲೆ ತೊಟ್ಟು, ಕೈಯಲ್ಲಿ ಹೂಬಾಣ ಹಿಡಿದ ಯುವಕರು, ಬಣ್ಣ ಬಣ್ಣದ ದಿರಿಸು ತೊಟ್ಟು ಮೊಗದ ಅಂಚಿಗೆ ನಾಚಿಕೆ ತುಂಬಿ ಕುಣಿತಕ್ಕೆ ಹೆಜ್ಜೆಯಾದ ಯುವತಿಯರು.
ನೆಹರೂ ಯುವ ಕೇಂದ್ರ ಸಂಘಟನೆ ಮತ್ತು ಗೃಹ ಸಚಿವಾಲಯದ ವತಿಯಿಂದ ನಗರದ ಯವನಿಕಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಏಳು ದಿನಗಳ ಬುಡಕಟ್ಟು ಯುವ ವಿನಿಮಯ ಶಿಬಿರದಲ್ಲಿ ಬುಡಕಟ್ಟು ಯುವಜನರ ನೃತ್ಯ ಸೃಷ್ಟಿಸಿದ ದೃಶ್ಯಗಳಿವು.
ಶಿಬಿರ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
ನೆಹರೂ ಯುವ ಕೇಂದ್ರ ಸಂಘಟನೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಪ್ರಧಾನ ನಿರ್ದೇಶಕ ಸಲೀಂ ಅಹಮ್ಮದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪ್ರಧಾನ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ, ನಿರ್ದೇಶಕ ವಿಕಾಸ್ಕುಮಾರ್ ವಿಕಾಸ್, ಎನ್ವೈಕೆಎಸ್ ಸದಸ್ಯ ಮಹಾಂತೇಶ್ ಹಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.