ಬೆಂಗಳೂರು: ‘ಸಂಘ ಸಂಸ್ಥೆಗಳು ಜನಪರ ಕಾರ್ಯಗಳಿಗೆ ಮುಂದಾಗಬೇಕು’ ಎಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು.
ಉತ್ತರಹಳ್ಳಿಯಲ್ಲಿ ಆರ್ಯ ಈಡಿಗ ಸಮಾಜ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಿರಂತರ ಸಂಘಟನೆಯಿಂದ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಧರ್ಮ ಗುರುಗಳ ಮಾರ್ಗದರ್ಶನದೊಂದಿಗೆ ಸಮಾಜದ ಏಳಿಗೆಗೆ ಸಂಘಟಿತ ಪ್ರಯತ್ನ ಮಾಡಬೇಕು. ಸಂಘಟನೆಗೆ ಜಾತಿಯ ಚೌಕಟ್ಟು ಸಲ್ಲದು. ನನಗೂ ಸದಸ್ಯತ್ವ ನೀಡಿ. ಈಡಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ನಾನೂ ಬದ್ಧ’ ಎಂದು ಹೇಳಿದರು.
ಸಮಾಜದ ಅಭಿವೃದ್ಧಿಯಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದು. ಧರ್ಮಗುರುಗಳಿಲ್ಲದೆ ಸಮಾಜದ ಉನ್ನತಿ ಅಸಾಧ್ಯ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಜಾತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ಜನಾಂಗದ ಹೆಸರಿನಿಂದ ಮುಂದೆ ಬಂದವರು ತದನಂತರ ಜಾತಿಯ ಹೆಸರನ್ನು ಹೇಳಲು ಮುಜುಗರಪಡುವುದು ಆತಂಕಕಾರಿ’ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ‘ಸಮಾಜದ ರಕ್ಷಣೆ ಹಾಗೂ ಉದ್ಧಾರಕ್ಕೆ ಗುರು ಹಾಗೂ ಗುರು ಪೀಠದ ಅವಶ್ಯಕತೆ ಇದೆ’ ಎಂದರು.
ಶಿಕ್ಷಕ ಹಾಗೂ ಕವಿ ಎಂ.ಒ.ಮಮತೇಶ್ ಅವರಿಗೆ ಆರ್ಯ ಈಡಿಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.