ಬೆಂಗಳೂರು: ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ (ಎಫ್ಪಿಎ), ಕರ್ನಾಟಕ ಕ್ಯಾನ್ಸರ್ ಸೊಸೈಟಿ ಮತ್ತು ಚಿತ್ತಾರಿ ಫೌಂಡೇಷನ್ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ `ವಿಶ್ವ ಜನಸಂಖ್ಯಾ ದಿನಾಚರಣೆ-13' ಕಾರ್ಯಕ್ರಮದ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಗೆ ಏರ್ಪಡಿಸಿದ್ದ `ಜನಸಂಖ್ಯೆ ಹೆಚ್ಚಳ' ವಿಷಯದ ಕುರಿತಾದ ಚಿತ್ರ ರಚನೆ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಚಿಸಿದ್ದ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಸ್ಪರ್ಧೆಯಲ್ಲಿ ಆಯ್ಕೆಯಾದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಚಿತ್ರಗಳು `ಹೆಚ್ಚುತ್ತಿರುವ ಜನಸಂಖ್ಯೆ ಪ್ರಪಂಚದ ವಿನಾಶಕ್ಕೆ ಕಾರಣವಾಗಲಿದೆ', `ಭಾರತದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ತೆರಳಲು ಜಾಗವಿಲ್ಲದಂತಾಗಿದೆ', `ಉಷ್ಣತೆಯಲ್ಲಿ ಹೆಚ್ಚಳ, ಬಾಲ ಕಾರ್ಮಿಕ ಪದ್ಧತಿ, ಒಣ ಭೂಮಿ, ನಿರುದ್ಯೋಗ, ನೀರಿನ ಕೊರತೆ, ಅಪೌಷ್ಟಿಕತೆ', `ಜನನ ಪ್ರಮಾಣದಲ್ಲಿ ಏರಿಕೆ ಮರಣ ಪ್ರಮಾಣದಲ್ಲಿ ಇಳಿಕೆ'... ಹತ್ತು ಹಲವು ಶೀರ್ಷಿಕೆಗಳಡಿ ಜನರ ಜಾಗೃತಿಗೆ ಪ್ರೇರಣೆ ನೀಡುವಂತಿದ್ದವು.
ಕಾರ್ಯಕ್ರಮ ಉದ್ಘಾಟಿಸಿದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿ ಸಂಗಮೇಶ ಉಪಾಸೆ, `ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದರು.
ಶಾಸಕ ಸಿ.ಎನ್.ಅಶ್ವಥನಾರಾಯಣ ಮಾತನಾಡಿದರು. ಎಫ್.ಪಿ.ಎ. ಇಂಡಿಯಾ ಅಧ್ಯಕ್ಷೆ ಮಧುರಾ ಅಶೋಕ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಅಗತ್ಯ ತ್ರಿಚಕ್ರ ಬೈಸಿಕಲ್ಗಳನ್ನು ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.