ಬೆಂಗಳೂರು: ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ನೀಡಿ ಹಾರ್ಟ್ ಫೌಂಡೇಷನ್ (ಎನ್ಎಚ್ಎಫ್) ಹಾಗೂ ಇಂದಿರಾ ನಗರ ರೋಟರಿ ಟ್ರಸ್ಟ್ ಸಹಕಾರದಲ್ಲಿ ಆಸ್ಪತ್ರೆಯ ಆವರಣದಲ್ಲಿ ‘ಹೃದ್ರೋಗ ಪುನರ್ವಸತಿ ಕೇಂದ್ರ’ವನ್ನು ಸ್ಥಾಪಿಸುತ್ತಿದೆ.
ಈ ಯೋಜನೆಯ ಒಟ್ಟು ವೆಚ್ಚ ₹ 5 ಕೋಟಿ. ಎನ್ಎಚ್ಎಫ್ ಹಾಗೂ ರೋಟರಿ ಟ್ರಸ್ಟ್ ಒಟ್ಟು ₹ 2 ಕೋಟಿ ನೀಡಿವೆ. ಉಳಿದ ಮೊತ್ತವನ್ನು ಜಯದೇವ ಸಂಸ್ಥೆ ಭರಿಸುತ್ತಿದೆ.
ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, 2018ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ’ ಎಂದರು.
ಕಟ್ಟಡದ ಕಾಮಗಾರಿಯನ್ನು ಎನ್ಎಚ್ಎಫ್ ಅಧ್ಯಕ್ಷ ಒ.ಪಿ. ಖನ್ನಾ, ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಅನಂತ್, ಸಿ.ಆರ್.ಸಿ. ಯೋಜನಾ ಮುಖ್ಯಸ್ಥ ಅಮರನಾಥ್ ಟಂಡನ್ ಪರಿಶೀಲಿಸಿದರು.
ಈ ಕೇಂದ್ರವು ಹೃದ್ರೋಗ ಶಸ್ತ್ರಚಿಕಿತ್ಸೆ ನಂತರದ ವ್ಯಾಯಾಮ, ದೈಹಿಕ ಚಟುವಟಿಕೆಯ ಸಮಾಲೋಚನೆ, ಶಸ್ತ್ರಚಿಕಿತ್ಸಾ ನಂತರದ ತಪಾಸಣೆಯ ಪ್ರಾಮುಖ್ಯ, ಗಾಯದ ಆರೈಕೆ ಮತ್ತು ನೈರ್ಮಲ್ಯ, ಮಧುಮೇಹ, ಅಧಿಕ ರಕ್ತದೊತ್ತಡದ ನಿರ್ವಹಣೆ, ಆಹಾರ ನಿರ್ವಹಣೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಒಂದೇ ಸೂರಿನಡಿ ಎಲ್ಲಾ ತಪಾಸಣೆಗಳನ್ನು ಮಾಡಲಾಗುತ್ತದೆ.
‘ಪ್ರತ್ಯೇಕ ಪುನರ್ವಸತಿ ಕೇಂದ್ರವು ರೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ. ಇಲ್ಲಿ ನುರಿತ ವೈದ್ಯರು, ಆಹಾರ ತಜ್ಞರು, ಫಿಜಿಯೊಥೆರಪಿಸ್ಟ್ ಹಾಗೂ ಯೋಗಚಿಕಿತ್ಸಕರನ್ನು ಒಳಗೊಂಡ ತಂಡ ಇರುತ್ತದೆ’ ಎಂದು ಸಿ.ಎನ್. ಮಂಜುನಾಥ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.