ADVERTISEMENT

ಜಲಮಂಡಲಿ ನೇಮಕಾತಿ 71 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:10 IST
Last Updated 13 ಸೆಪ್ಟೆಂಬರ್ 2011, 19:10 IST

ಬೆಂಗಳೂರು: ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಲಿ 71 ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಪಡಿಸಿದೆ.

ನಿಗದಿತ ಗಡುವಿನ ಒಳಗೆ ದಾಖಲಾತಿ ಹಾಗೂ ಸಮ್ಮತಿ ಪತ್ರ ಹಾಗೂ ಸಕ್ಷಮ ಪ್ರಾಧಿಕಾರಗಳ ತಪಾಸಣೆಗೆ ಬೇಕಾದ ದಾಖಲಾತಿಗಳನ್ನು ಸಲ್ಲಿಸದ ಸಹಾಯಕ ಅಭಿಯಂತರ, ಕಿರಿಯ ಅಭಿಯಂತರ, ಶೀಘ್ರಲಿಪಿಗಾರ, ಬೆರಳಚ್ಚುಗಾರ, ಸಹಾಯಕ ಹಾಗೂ ಕಿರಿಯ ಸಹಾಯಕರ ಹುದ್ದೆಗಳಿಗೆ ಆಯ್ಕೆಯಾಗಿದ್ದ ಒಟ್ಟು 71 ಅಭ್ಯರ್ಥಿಗಳನ್ನು ನೇಮಕಾತಿಯಿಂದ ಕೈಬಿಡಲಾಗಿದೆ ಎಂದು ಜಲಮಂಡಲಿ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಜಲಮಂಡಲಿ ಫೆಬ್ರುವರಿ 22,  2008ರಲ್ಲಿ ಹೊರಡಿಸಿದ್ದ ಅಧಿಸೂಚನೆಗೆ ಅನುಗುಣವಾಗಿ ನೇಮಕಾತಿ ಆದೇಶ ಜಾರಿಮಾಡಿತ್ತು. ವಿವರಗಳನ್ನು ಬೆಂಗಳೂರು ಜಲಮಂಡಲಿ ವೆಬ್‌ಸೈಟ್ ಹಾಗೂ ಕೇಂದ್ರ ಕಚೇರಿಯ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿದೆ.

ಇಂದು ನೀರಿನ ಅದಾಲತ್
ಜಲಮಂಡಳಿಯ ಕೇಂದ್ರ 2ನೇ ಉಪ ವಿಭಾಗದ ನೀರಿನ ಅದಾಲತ್ ಇದೇ ಬುಧವಾರ (ಸೆ.14) ಬೆಳಿಗ್ಗೆ 9.30ರಿಂದ 11ರ ವರೆಗೆ ಹೈಗ್ರೌಂಡ್ಸ್‌ನಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ನಡೆಯಲಿದೆ.

ಕೇಂದ್ರ 2ನೇ ಉಪವಿಭಾಗದ ಸೇವಾ ಠಾಣೆಗಳಾದ ಎಚ್‌ಜಿಆರ್ ಮತ್ತು ಕೋಲ್ಸ್ ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಹಕರು ಈ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬಹುದು. 

ನೀರಿನ ಬಿಲ್ಲಿಂಗ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಲ್ಲಿ ವಿಳಂಬ, ಗೃಹೇತರದಿಂದ ಗೃಹಸಂಪರ್ಕಕ್ಕೆ ಪರಿವರ್ತನೆ ಮಂಜೂರಾತಿಯಲ್ಲಿ ವಿಳಂಬ, ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು.

ಗ್ರಾಹಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು- 2294 5187/2294 5191.

ಕಾರ್ಯಕ್ರಮ ಮುಂದೂಡಿಕೆ
ಕರ್ನಾಟಕ ತೋಟಗಾರಿಕಾ ಅಧಿಕಾರಿಗಳ ಸಂಘ ಸೆ. 14ರಂದು ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಕುರಿತ ತಾಂತ್ರಿಕ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವನ್ನು ಕಾರಾಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT