ADVERTISEMENT

ಜೀವ ಉಳಿಸಲು ಈಜು ಕಲಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:37 IST
Last Updated 2 ಆಗಸ್ಟ್ 2013, 19:37 IST

ಬೆಂಗಳೂರು: `ಮಕ್ಕಳಲ್ಲಿ ಸ್ಥೈರ್ಯ ತುಂಬಿ ನೀರಿನ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಲು ಈಜು ಶಿಬಿರವನ್ನು ಆಯೋಜಿಸಲಾಗಿದೆ' ಎಂದು ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ (ಇಂಡಿಯಾ) ಮುಖ್ಯ ಕಾರ್ಯನಿರ್ವಾಹಕ ಗುರವಿಂದರ್ ಸಿಂಗ್ ಹೇಳಿದರು.

ಸ್ಪೀಡೊ ಇಂಟರ್‌ನ್ಯಾಷನಲ್ ಮತ್ತು ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ (ಇಂಡಿಯಾ) ಜಂಟಿಯಾಗಿ ನಗರದ ಜೆಪಿ ಪಾರ್ಕ್ ಈಜುಕೊಳದಲ್ಲಿ ಶುಕ್ರವಾರ ಆಯೋಜಿಸಿರುವ `ಸ್ಪೀಡೊ ಸ್ವಿಮ್ ಅಂಡ್ ಸರ್ವೈವ್' ನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

`ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ಹಳ್ಳಗಳಿರುತ್ತವೆ. ತಿಳಿಯದೆ ಚಿಕ್ಕ ಮಕ್ಕಳು ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ, ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಈಜು ಮತ್ತು ನೀರಿನಲ್ಲಿ ಬಿದ್ದವರು ಪ್ರಾಣವನ್ನು ಉಳಿಸುವ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ' ಎಂದರು.

`ಮಕ್ಕಳಿಗೆ ಈಜು ಮತ್ತು ನೀರಿನಲ್ಲಿ ಬಿದ್ದವರ ಪ್ರಾಣ ಉಳಿಸಲು ಕೈಗೊಳ್ಳುವ ಕ್ರಮಗಳ ಕುರಿತು ಈ ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ಒಟ್ಟು 20 ಬ್ಯಾಚ್‌ಗಳು, ಒಂದು ಬ್ಯಾಚ್‌ನಲ್ಲಿ 20 ಮಕ್ಕಳಿದ್ದಾರೆ. ಮುಂದಿನ 15 ದಿನಗಳವರೆಗೆ ಈ ಶಿಬಿರ ನಡೆಯಲಿದೆ' ಎಂದು ಮಾಹಿತಿ ನೀಡಿದರು.

ಸ್ಪೀಡೊ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅಂಕುರ್ ಶರ್ಮಾ, `ಪೋಷಕರು ಮಕ್ಕಳಿಗೆ ಚಿಕ್ಕವರಿರುವಾಗಲೇ ನೀರಿನ ಬಗ್ಗೆ ಭಯ ಮೂಡಿಸಿರುತ್ತಾರೆ. ಇದರಿಂದ, ಮಕ್ಕಳಿಗೆ ನೀರೆಂದರೆ ಭಯವಾಗುತ್ತಿರುತ್ತದೆ. ಇದರಿಂದ, ಮಕ್ಕಳ ಭಯವನ್ನು ಕಳೆದು, ಅವರಲ್ಲಿ ಈಜಲು ಕಲಿಸಿದರೆ, ಅವರು ಮುಖ್ಯವಾಗಿ ನೀರಿನ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾರೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT