ಕೆಂಗೇರಿ: `ಸಾಮಾಜಿಕ ಸಮಾನತೆ ಮತ್ತು ಆಡಳಿತ ರಂಗದಲ್ಲಿ ಪ್ರಾತಿನಿಧ್ಯಕ್ಕಾಗಿ ತಿಗಳ ಜನಾಂಗದ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕು~ ಎಂದು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತ ಇಕ್ಕೇರಿ ಅಭಿಪ್ರಾಯಪಟ್ಟರು.
ಕೆಂಗೇರಿಯ ಕೃಷ್ಣ ಪ್ರಿಯ ಕಲ್ಯಾಣ ಮಂಟಪದಲ್ಲಿ ತಿಗಳ ಜನಾಂಗ ವೇದಿಕೆ ಮತ್ತು ಎಲ್ಲಮ್ಮ ಭಕ್ತ ಮಂಡಳಿ ಜಂಟಿಯಾಗಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
`ತಿಗಳ ಜನಾಂಗವು ಇತಿಹಾಸ ಪೂರ್ವ ಕಾಲದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿದೆ. ಪ್ರಾಚೀನ ಕಾಲದ ಎಲ್ಲ ಆಚರಣೆಗಳನ್ನು ಜನಾಂಗವು ಇಂದಿಗೂ ಉಳಿಸಿಕೊಂಡು ಬಂದಿದೆ~ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಘಾಲಯದ ಹಿರಿಯ ಐಪಿಎಸ್ ಅಧಿಕಾರಿ ಎಂ.ಪಿ.ರಾಘವೇಂದ್ರ, `ಜನಾಂಗವು ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಶಿಕ್ಷಣ ಪಡೆದ ಯುವಕರು ಉನ್ನತ ಸ್ಥಾನಕ್ಕೇರಿ ಜನಾಂಗದ ಬಡವರ ಉದ್ಧಾರಕ್ಕೆ ಶ್ರಮಿಸಬೇಕು~ ಎಂದು ಕರೆ ನೀಡಿದರು.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಗುಣಶೇಖರ್, ಮಾಜಿ ಮೇಯರ್ ವಾಸುದೇವ ಮೂರ್ತಿ, ಪ್ರಾಂಶುಪಾಲ ಪ್ರೊ.ಕೆ.ಆರ್.ವೇಣುಗೋಪಾಲ್, ಶಾಸಕ ನೆ.ಲ.ನರೇಂದ್ರ ಬಾಬು, ಎಸಿಪಿ ಸುಬ್ಬಣ್ಣ, ತಹಶೀಲ್ದಾರ್ ಹನುಮಂತರಾಯಪ್ಪ, ರಾಜ್ಯದ ಪರಿಸರ ಇಲಾಖೆ ಜಂಟಿ ಆಯುಕ್ತ ಲಕ್ಷ್ಮಣ, ನಗರದ ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷೆ ಇಂದ್ರಮ್ಮ, ಸಮಾಜ ಸೇವಕ ಬಿ.ಎ.ಕೃಷ್ಣಮೂರ್ತಿ, ಚಿಕ್ಕಮುನಿಯಪ್ಪ ಸೇರಿದಂತೆ ಜನಾಂಗದ ಗಣ್ಯರನ್ನು ಸನ್ಮಾನಿಸಲಾಯಿತು.
ಬಿಬಿಎಂಪಿ ಸದಸ್ಯರಾದ ರಾ.ಆಂಜನಪ್ಪ, ಎ.ಎಚ್.ಹನುಮಂತೇಗೌಡ, ವೀಣಾ ನಾಗರಾಜು, ಕಂಠೀರವ ಸ್ಟುಡಿಯೋ ಅಧ್ಯಕ್ಷ ರುದ್ರೇಶ್, ಜೆಡಿಎಸ್ ಮುಖಂಡ ಜವರಾಯಿಗೌಡ, ಸಂಸ್ಥೆ ಕಾರ್ಯದರ್ಶಿ ಪಿ.ಮುನಿರಾಜು ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.