ADVERTISEMENT

ದ್ವಿಚಕ್ರ ವಾಹನ ಕಳವಿಗೆ ಮಕ್ಕಳ ಬಳಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 20:34 IST
Last Updated 4 ಮಾರ್ಚ್ 2018, 20:34 IST
ಜಪ್ತಿ ಮಾಡಿದ ದ್ವಿಚಕ್ರ ವಾಹನಗಳ ಜತೆ ಆರೋಪಿ
ಜಪ್ತಿ ಮಾಡಿದ ದ್ವಿಚಕ್ರ ವಾಹನಗಳ ಜತೆ ಆರೋಪಿ   

ಬೆಂಗಳೂರು: ಮಕ್ಕಳನ್ನು ಬಳಸಿಕೊಂಡು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಶಶಿಕುಮಾರ್ (25) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಂದ್ರಹಳ್ಳಿ ಶ್ರೀಚಕ್ರನಗರದ ನಿವಾಸಿಯಾದ ಆತನಿಂದ ₹2.50 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಸಹಕರಿಸುತ್ತಿದ್ದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

‘ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಪ್ರತಾಪ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಶಿಕುಮಾರ್‌, ಬಸವೇಶ್ವರನಗರ ಹಾಗೂ ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಈ ಪ್ರಕರಣಗಳ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದಕ್ಕೆ ನಿರಂತರವಾಗಿ ಗೈರಾಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಯು ಹಣದ ಆಮಿಷವೊಡ್ಡಿ ಬಾಲಕರ ಪರಿಚಯ ಮಾಡಿಕೊಂಡಿದ್ದ.  ಕದ್ದ ವಾಹನಗಳ ಮಾರಾಟದಿಂದ ಬಂದ ಹಣವನ್ನು ಮೋಜು–ಮಸ್ತಿಗೆ ಖರ್ಚು ಮಾಡುತ್ತಿದ್ದ.’

‘ನಕಲಿ ಕೀ ಬಳಸಿ ವಾಹನಗಳ ಲಾಕ್‌ ತೆರೆಯುತ್ತಿದ್ದರು. ಜತೆಗೆ ಲಾಕ್‌ ಮಾಡದ ವಾಹನಗಳನ್ನು ಇವರು ಕಳವು ಮಾಡುತ್ತಿದ್ದರು. ರಾಜಾಜಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಇವರು ಹೆಚ್ಚು ವಾಹನಗಳನ್ನು ಕದ್ದಿದ್ದರು. ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಂದ್ರಹಳ್ಳಿ ಹಾಗೂ ಶ್ರೀಚಕ್ರನಗರದ ಮನೆಯೊಂದರಲ್ಲಿ ನಿಲ್ಲಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.