ಬೆಂಗಳೂರು: ‘ಸಾರ್ವಜನಿಕರು ಹಾಲು ಮಾರಾಟ ಮುಷ್ಕರದ ಬಗ್ಗೆ ಆತಂಕ ಪಡಬೇಕಾಗಿಲ್ಲ, ಯಾವುದೇ ಕಾರಣಕ್ಕೂ ನಂದಿನಿ ಹಾಲು ಮಾರಾಟ ನಿಲ್ಲುವುದಿಲ್ಲ’ ಎಂದು ಕೆ.ಎಂ.ಎಫ್ನ ಬೆಂಗಳೂರು ಘಟಕದ ಅಧ್ಯಕ್ಷ ರಮೇಶ್ ಹೇಳಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಏಜೆಂಟರಿಗೆ ಯಾವುದೇ ತೊಂದರೆ ಇದ್ದಲ್ಲಿ ಸಂಸ್ಥೆಯೊಂದಿಗೆ ನೇರವಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಆದರೆ, ಕೆಲ ಏಜೆಂಟರು ಮುಷ್ಕರದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿದ್ದು, ಅವರ ವಿರುದ್ಧ ಕೆ.ಎಂ.ಎಫ್ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ’ ಎಂದರು.
ಬೆಂಗಳೂರು ಡೇರಿ ಏಜೆಂಟ್ಸ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ರಂಗಸ್ವಾಮಿ ‘ನಂದಿನಿ ಹಾಲು ಮಾರಾಟಗಾರರ ವೆಲ್ಫೇರ್ ಅಸೋಸಿಯಯೇಷನ್ ಕರೆ ನೀಡಿರುವ ಹಾಲು ಮಾರಾಟದ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ, ನಾವು ನಗರದಲ್ಲಿ 1700 ಏಜೆಂಟರಿದ್ದು ಪ್ರತಿನಿತ್ಯದ ಹಾಗೇ ನಾವು ಹಾಲು ಮಾರಾಟವನ್ನು ಮಾಡುತ್ತೇವೆ’ ಎಂದು ಹೇಳಿದರು.
‘ಹಾಲು ಮಾರಾಟಕ್ಕೆ ಮುಷ್ಕರ ನೀಡಿರುವ ಸಂಸ್ಥೆಯ ಬೇಡಿಕೆಗಳು ಅಪ್ರಸ್ತುತವಾಗಿದ್ದು, ಅವರು ಕೇಳಿರುವ ನಿರ್ದೇಶಕನ ಸ್ಥಾನಕ್ಕೆ ಕೆ.ಎಂ.ಎಫ್ನ ನಿಯಮಗಳಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರವು ವ್ಯಾಪಾರ ಮಾಡುವವರು ತಮ್ಮ ಪರವಾನಗಿಯನ್ನು ತಾವೇ ಪಡೆಯಬೇಕು ಎಂದು ಆದೇಶ ನೀಡಿದೆ. ಆದ್ದರಿಂದ ಏಜೆಂಟರು ಮುಷ್ಕರವನ್ನು ಕೈಬಿಡಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.