ADVERTISEMENT

ನೀರಿಗಾಗಿ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:37 IST
Last Updated 28 ಮೇ 2018, 19:37 IST
ಹೆಸರಘಟ್ಟ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು
ಹೆಸರಘಟ್ಟ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಹೆಸರಘಟ್ಟ ಗ್ರಾಮದ ಆರನೇ ವಾರ್ಡ್‌ನಲ್ಲಿ ಎರಡು ತಿಂಗಳಿನಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರಿ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯಿತಿ ಮುಂದೆ ಸೋಮವಾರ ಮೌನ ಪ್ರತಿಭಟನೆ ನಡೆಸಿದರು. 

‘ಸುಮಾರು 70 ಮನೆಗಳು ಇಲ್ಲಿವೆ. 300 ಜನ ಇಲ್ಲಿ ವಾಸ ಮಾಡುತ್ತಿದ್ದೇವೆ. ಎರಡು ತಿಂಗಳ ಹಿಂದೆ, ಮನೆಗಳಿಗೆ ಬರುವ ನೀರಿನ ಮುಖ್ಯ ಕೊಳವೆ ಒಡೆದು ಹೋಗಿತ್ತು. ಅಲ್ಲಿಂದ ಇಲ್ಲಿಯ ತನಕ ಒಡೆದ ಕೊಳವೆಯನ್ನು ಗ್ರಾಮ ಪಂಚಾಯಿತಿಯವರು ಸರಿಪಡಿಸದೇ ಪ್ರತಿ ದಿನ ಒಂದೊಂದು ಕಾರಣವನ್ನು ನೀಡುತ್ತಿದ್ದಾರೆ. ಒಡೆದ ಕೊಳವೆಯನ್ನು ದುರಸ್ತಿ ಮಾಡಿಸದೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ’ ಎಂದು ಬಡಾವಣೆಯ ನಿವಾಸಿ ಕಿಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ಕಿಲೊ ಮೀಟರ್‌ ದೂರದಿಂದ ಸೈಕಲ್‍ನಲ್ಲಿ ನಿತ್ಯ ಉಪಯೋಗಕ್ಕೆ ನೀರು ತರಬೇಕಾಗಿದೆ.  ನೀರಿನ ಕಂದಾಯ ಕಟ್ಟುತ್ತಿದ್ದರೂ ಪಂಚಾಯಿತಿ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ನಿವಾಸಿ ವಸಂತಮ್ಮ ಅಳಲು ತೋಡಿಕೊಂಡರು.

ADVERTISEMENT

‘ವಾರ್ಡ್ ಸದಸ್ಯ ಪ್ರಭಾಕರ್ ಅವರು ಈ ಕಡೆ ತಿರುಗಿಯೂ ನೋಡಿಲ್ಲ. ಆರ್ಥಿಕವಾಗಿ ಬಲವುಳ್ಳವರು ಮಾತ್ರ ಟ್ಯಾಂಕರ್‌ಗಳಲ್ಲಿ ನೀರು ಹಾಕಿಸಿ
ಕೊಳ್ಳುತ್ತಿದ್ದಾರೆ. ಉಳಿದವರ ಪಾಡನ್ನು ಯಾರೂ ಕೇಳುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಮ್ಮ ಸಮಸ್ಯೆ ಬಗ್ಗೆ ಪಂಚಾಯಿತಿಗೆ 15 ದಿನಗಳ ಹಿಂದೆ ಲಿಖಿತವಾಗಿ ಬರೆದು ಕೊಟ್ಟಿದ್ದೇವೆ. ಆದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ’ ಎಂದು ನಟರಾಜ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.