ಬೆಂಗಳೂರು: ದೇವನಹಳ್ಳಿ ಬಳಿ ಮಾ.12ರಂದು ನಿಗೂಢವಾಗಿ ಮೃತಪಟ್ಟಿದ್ದ ನೈಜೀರಿಯಾ ಪ್ರಜೆಯ ಮರಣೋತ್ತರ ಪರೀಕ್ಷೆಯು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಶನಿವಾರ ನಡೆಯಿತು.
ನೈಜೀರಿಯಾ ಹೈ ಕಮಿಷನರ್ ಅವರು ಮರಣೋತ್ತರ ಪರೀಕ್ಷೆ ನಡೆಸಲು ಶುಕ್ರವಾರ ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದರಿಂದಾಗಿ ನಗರ ಪೊಲೀಸರು ಸ್ಥಳೀಯ ನೈಜೀರಿಯಾ ಪ್ರಜೆಗಳ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ ಮಾಡಿಸಿದರು.
‘ಮೃತದೇಹವನ್ನು ಸದ್ಯ ಆಸ್ಪತ್ರೆಯಲ್ಲೇ ಇರಿಸಿದ್ದೇವೆ. ಅವರ ಸಂಬಂಧಿಕರು ಯಾರಾದರೂ ಬಂದರೆ ಹಸ್ತಾಂತರಿಸುತ್ತೇವೆ. ಇಲ್ಲದಿದ್ದರೆ ನಗರದಲ್ಲೇ ಅಂತ್ಯಕ್ರಿಯೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.