ADVERTISEMENT

ಪುಸ್ತಕಗಳು ವಕೀಲರ ಆಸ್ತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST
ಪುಸ್ತಕಗಳು ವಕೀಲರ ಆಸ್ತಿ
ಪುಸ್ತಕಗಳು ವಕೀಲರ ಆಸ್ತಿ   

ಬೆಂಗಳೂರು: `ಪುಸ್ತಕಗಳು ವಕೀಲ ಸಮುದಾಯದ ಆಸ್ತಿ ಇದ್ದಂತೆ. ವಕೀಲರು ಪುಸ್ತಕಗಳಿಂದ ಜ್ಞಾನ ಸಂಪಾದಿಸಿದರೆ ಉಳಿದ ಆಸ್ತಿಗಳು ತಾನೇ ತಾನಾಗಿ ಒಲಿದು ಬರುತ್ತವೆ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.

ವಕೀಲರ ಸಂಘ ಮತ್ತು ಸನ್ ಪಬ್ಲಿಷಿಂಗ್ ಹೌಸ್ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಎ.ಎಸ್.ಎಸ್.ಕುಮಾರ್ ಅವರು ಪ್ರಕಟಿಸಿರುವ `ಲಾ ರಿಲೇಟಿಂಗ್ ಟು ಮನಿ ಸೂಟ್ಸ್ ಇನ್ ಇಂಡಿಯಾ~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪುಸ್ತಕಗಳನ್ನು ಅಧ್ಯಯನ ಮಾಡದ ವಕೀಲ ರಣಭೂಮಿಯಲ್ಲಿ ಶಸ್ತ್ರಾಸ್ತ್ರವಿಲ್ಲದೆ ನಿಂತ ಯೋಧನಂತೆ. ವಕೀಲರು ತಮ್ಮ ವರಮಾನದಲ್ಲಿ ಒಂದು ಭಾಗವನ್ನು ಗ್ರಂಥ ಖರೀದಿಗೆ ಮೀಸಲಿಡಬೇಕು.

ದಿನಕ್ಕೆ ಒಂದು ಉಲ್ಲೇಖಿತ ತೀರ್ಪನ್ನು ಅಧ್ಯಯನ ಮಾಡಿದರೂ ಹತ್ತು ವರ್ಷದಲ್ಲಿ 36 ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ತೀರ್ಪುಗಳ ಬಗ್ಗೆ ಅರಿಯಬಹುದು. ಇದರಿಂದ ವೈದ್ಯರ `ಜ್ಞಾನ ಬ್ಯಾಂಕ್~ ವೃದ್ಧಿಯಾಗುತ್ತದೆ. ವಿಚಾರಣಾ ಪ್ರಕ್ರಿಯೆಯಲ್ಲಿ ಹಿಡಿತ ಸಾಧಿಸುವುದು ಸಾಧ್ಯವಾಗುತ್ತದೆ~ ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ, `ಇಡೀ ಕಾನೂನು ಕ್ಷೇತ್ರಕ್ಕೆ ಪುಸ್ತಕ ಉತ್ತಮ ಕೊಡುಗೆಯಾಗಿದೆ. ಕೃತಿಯ ಪ್ರತಿಗಳು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಕಾನೂನು ಸಂಬಂಧಿ ಗ್ರಂಥಗಳು ಹೆಚ್ಚು ಹೆಚ್ಚು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು~ ಎಂದು ತಿಳಿಸಿದರು.

ಸನ್ ಪಬ್ಲಿಷಿಂಗ್ ಹೌಸ್‌ನ ಡಾ.ಎ.ಎಸ್.ಎಸ್.ಕುಮಾರ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಾಜಣ್ಣ, ಖಜಾಂಚಿ ಟಿ.ಜಿ.ರವಿ, ನಗರ ಘಟಕದ ಉಪಾಧ್ಯಕ್ಷೆ ಬಿ.ಜೆ.ಜಿ ಸತ್ಯಶ್ರೀ, ಜಂಟಿ ಕಾರ್ಯದರ್ಶಿ ವಿ. ಮಂಜುನಾಥ್, ಗ್ರಂಥಾಲಯ ಸಮಿತಿ ಅಧ್ಯಕ್ಷ ಶಂಕರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.