ಬೆಂಗಳೂರು: ಮೆಜೆಸ್ಟಿಕ್ ಮತ್ತು ನಗರ ರೈಲು ನಿಲ್ದಾಣದ ನಡುವೆ 229 ಮೀಟರ್ ಉದ್ದದ ಸುರಂಗ ನಿರ್ಮಾಣ ಕಾರ್ಯ ಸೋಮವಾರ (ಮಾ. 17) ಸಂಜೆ 4ಕ್ಕೆ ಪೂರ್ಣಗೊಂಡಿತು. ಇದರೊಂದಿಗೆ ‘ನಮ್ಮ ಮೆಟ್ರೊ’ದ ಪೂರ್ವ– ಪಶ್ಚಿಮ ಕಾರಿಡಾರ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ 4.8 ಕಿ.ಮೀ ಉದ್ದದ ಜೋಡಿ ಸುರಂಗ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದೆ.
‘ಪೂರ್ಣಗೊಂಡ ಸುರಂಗದಲ್ಲಿ ಹಳಿ ಅಳವಡಿಸುವ ಕಾರ್ಯ ಸದ್ಯದಲ್ಲೇ ಆರಂಭಿಸಲಾಗುವುದು. ಡಿಸೆಂಬರ್ ಹೊತ್ತಿಗೆ ಎಂಜಿ ರಸ್ತೆ ನಿಲ್ದಾಣದಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ನಿಲ್ದಾಣದವರೆಗೆ ರೈಲು ಸಂಚಾರ ಶುರುವಾಗಲಿದೆ’ ಎಂದು ‘ಬೆಂಗಳೂರು ಮೆಟ್ರೊ ರೈಲು ನಿಗಮ’ದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದರು.
ಈ ಜೋಡಿ ಸುರಂಗವನ್ನು ‘ಹೆಲೆನ್’ ಹೆಸರಿನ ಸುರಂಗ ಕೊರೆಯುವ ಯಂತ್ರವು (ಟಿಬಿಎಂ) ನಿರ್ಮಿಸಿದೆ. ರೈಲು ನಿಲ್ದಾಣದಲ್ಲಿ ಹತ್ತು ಪ್ಲಾಟ್ಫಾರಂಗಳು ಸೇರಿದಂತೆ ಒಟ್ಟು 23 ಹಳಿಗಳ (ಟ್ರ್ಯಾಕ್) ಕೆಳಭಾಗದಲ್ಲಿ ಯಾವುದೇ ಅಡೆತಡೆ ಇಲ್ಲದೇ ಈ ಸುರಂಗ ನಿರ್ಮಾಣಗೊಂಡಿರುವುದು ವಿಶೇಷ.
ಮೆಜೆಸ್ಟಿಕ್ ಬಳಿ ನವೆಂಬರ್ 1ರಂದು ಕಾರ್ಯಾಚರಣೆ ಆರಂಭಿಸಿದ ಹೆಲೆನ್, ಒಂದನೇ ಸುರಂಗದ ಕಾಮಗಾರಿಯನ್ನು ಹತ್ತು ವಾರಗಳಲ್ಲೇ ಕಾಮಗಾರಿ ಪೂರ್ಣಗೊಳಿಸಿತ್ತು. ನಂತರ ‘ಯು’ ಟರ್ನ್ ಮಾಡಿ ಎರಡನೇ ಸುರಂಗದ ಕಾಮಗಾರಿಯನ್ನು ಜನವರಿ 8ರಂದು ಆರಂಭಿಸಿತ್ತು.
ಈ ಯಂತ್ರವು ಈಗಾಗಲೇ ಮೆಜೆಸ್ಟಿಕ್ನಿಂದ ಸೆಂಟ್ರಲ್ ಕಾಲೇಜು (925 ಮೀ.), ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧ (725 ಮೀ.) ಮತ್ತು ವಿಧಾನಸೌಧದಿಂದ ಮಿನ್ಸ್ಕ್ಚೌಕದವರೆಗೆ (459 ಮೀ.) ಸುರಂಗವನ್ನು ನಿರ್ಮಿಸಿದೆ. ಮೆಜೆಸ್ಟಿಕ್ನಿಂದ ಮಿನ್ಸ್ಕ್ಚೌಕದವರೆಗಿನ
ಜೋಡಿ ಮಾರ್ಗದ ಮತ್ತೊಂದು ಸುರಂಗವನ್ನು ‘ಮಾರ್ಗರೀಟಾ’ ಹೆಸರಿನ ಟಿಬಿಎಂ ನಿರ್ಮಿಸಿತ್ತು.
ಈ ಸುರಂಗ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಮಿನ್ಸ್ಕ್ ಚೌಕ, ವಿಧಾನಸೌಧ, ಸೆಂಟ್ರಲ್ ಕಾಲೇಜು, ನಗರ ರೈಲು ನಿಲ್ದಾಣದ ನೆಲದಡಿಯ ನಿಲ್ದಾಣಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.
ಮೆಜೆಸ್ಟಿಕ್ ನಿರ್ಣಾಯಕ: ಪೂರ್ವ– ಪಶ್ಚಿಮ ಕಾರಿಡಾರ್ ಮತ್ತು ಉತ್ತರ– ದಕ್ಷಿಣ ಕಾರಿಡಾರ್ಗಳು ಸಂಧಿಸುವ ಮೆಜೆಸ್ಟಿಕ್ನಲ್ಲಿ ‘ಇಂಟರ್ಚೇಂಜ್ ನಿಲ್ದಾಣ’ದ ಕಾರ್ಯ ಪ್ರಗತಿಯಲ್ಲಿದೆ.
ಉತ್ತರ– ದಕ್ಷಿಣ ಕಾರಿಡಾರ್ನ ಮೇಲೆ ಪೂರ್ವ– ಪಶ್ಚಿಮ ಕಾರಿಡಾರ್ ಹಾದು ಹೋಗಲಿದೆ. ಕೆಳ ಮಾರ್ಗದ ಛಾವಣಿ ಕಾರ್ಯ ಮುಗಿದಿದ್ದು, ಅದರ ಮೇಲೆ ಪೂರ್ವ– ಪಶ್ಚಿಮ ಕಾರಿಡಾರ್ ಮಾರ್ಗದ ಪ್ಲಾಟ್ಫಾರಂ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ.
‘ಮೆಜೆಸ್ಟಿಕ್ನಲ್ಲಿ ಹಳಿ ಅಳವಡಿಸುವ ಕಾರ್ಯ ಪೂರ್ಣಗೊಂಡರೆ ಎಂಜಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ರೈಲು ಓಡಿಸಲು ಸಾಧ್ಯವಾಗಲಿದೆ. ಮೆಜೆಸ್ಟಿಕ್ನಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಸಂಪೂರ್ಣ ಆಗುವವರೆಗೆ ಅಲ್ಲಿ ನಿಲುಗಡೆ ಮಾಡದೇ ರೈಲು ಸಂಚಾರ ನಡೆಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಖರೋಲಾ ಹೇಳಿದರು.
ಇನ್ನು ಉತ್ತರ– ದಕ್ಷಿಣ ಕಾರಿಡಾರ್ ನಲ್ಲಿ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ‘ಗೋದಾವರಿ’ ಟಿಬಿಎಂ, ಒಂದನೇ ಸುರಂಗವನ್ನು ನಿರ್ಮಿಸುತ್ತಿದೆ. ಅದು ಪೂರ್ಣಗೊಂಡ ಮೇಲೆ ‘ಯು’ ತಿರುವು ಪಡೆದು ಎರಡನೇ ಸುರಂಗವನ್ನೂ ನಿರ್ಮಿಸಲಿದೆ.
ಕೆ.ಆರ್.ರಸ್ತೆಯ ಶಿವಶಂಕರ್ ವೃತ್ತದಿಂದ ವಾಣಿ ವಿಲಾಸ್ ಆಸ್ಪತ್ರೆಯವರೆಗೆ ಈಗಾಗಲೇ ಜೋಡಿ ಸುರಂಗವನ್ನು ನಿರ್ಮಿಸಿರುವ ‘ಕೃಷ್ಣಾ’ ಮತ್ತು ‘ಕಾವೇರಿ’ ಟಿಬಿಎಂಗಳು, ಚಿಕ್ಕಪೇಟೆ ಕಡೆಗೆ ಜೋಡಿ ಸುರಂಗ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿವೆ. ಇದು ಮುಗಿದ ಬಳಿಕ ಚಿಕ್ಕಪೇಟೆಯಿಂದ ಮೆಜೆಸ್ಟಿಕ್ವರೆಗೆ ಜೋಡಿ ಸುರಂಗವನ್ನು ನಿರ್ಮಿಸಲಿವೆ.
ನಿಲ್ದಾಣಗಳ ವಿವರ
ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾನಗರ, ಹಲಸೂರು, ಟ್ರಿನಿಟಿ ವೃತ್ತ, ಎಂಜಿ ರಸ್ತೆ, ಮಿನ್ಸ್್ಕ ಚೌಕ, ವಿಧಾನಸೌಧ, ಸೆಂಟ್ರಲ್ ಕಾಲೇಜು, ಮೆಜೆಸ್ಟಿಕ್, ನಗರ ರೈಲು ನಿಲ್ದಾಣ, ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿನಗರ, ನಾಯಂಡಹಳ್ಳಿ
ವಾರಾಂತ್ಯ ಹೆಚ್ಚು ಜನರ ಸಂಚಾರ
‘ನಮ್ಮ ಮೆಟ್ರೊ’ದ ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ಸಂಪಿಗೆ ರಸ್ತೆ ನಿಲ್ದಾಣದವರೆಗಿನ ಮಾರ್ಗದಲ್ಲಿ ಪ್ರತಿ ದಿನ 20,000ದಿಂದ 25,000 ಜನರು ಪ್ರಯಾಣ ಮಾಡುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚು ಜನರು ಸಂಚರಿಸುತ್ತಿದ್ದಾರೆ.
ಈ ಮಾರ್ಗದಲ್ಲಿ ಮಾ.1ರಂದು ಸಾರ್ವಜನಿಕ ಸಂಚಾರ ಪ್ರಾರಂಭವಾಯಿತು. ಮಾ. 2ರಂದು 67,000 ಮಂದಿ, 9ರಂದು 56,000 ಮತ್ತು 16ರಂದು 39,000 ಮಂದಿ ಪ್ರಯಾಣಿಸಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.