ADVERTISEMENT

ಪೊಲೀಸರೊಂದಿಗೆ ಕೈಜೋಡಿಸಿ: ಡಿಜಿಪಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:52 IST
Last Updated 1 ಡಿಸೆಂಬರ್ 2015, 19:52 IST

ಬೆಂಗಳೂರು: ‘ಪೊಲೀಸರ ಕಣ್ತಪ್ಪಿಸಿ ಅಪರಾಧ ಚಟುವಟಿಕೆಗಳು ನಡೆಯಬಹುದು. ಆದರೆ, ಸಾರ್ವಜನಿಕರ ಕಣ್ತಪ್ಪಿಸಿ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರೊಂದಿಗೆ ನಾಗರಿಕರು ಕೈಜೋಡಿಸಿದಾಗ ಮಾತ್ರ ಅಪರಾಧ ತಡೆಗಟ್ಟಲು ಸಾಧ್ಯ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಪರಾಧ ತಡೆ ಮಾಸಾಚರಣೆ–2015’ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ‘ಅಪರಾಧ ಘಟಿಸದಂತೆ ನೋಡಿಕೊಳ್ಳುವುದು ಹಾಗೂ ಕೃತ್ಯ ನಡೆದ ನಂತರ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರ  ಕರ್ತವ್ಯ. ಈ ಕಾರ್ಯವನ್ನು ಸಿಬ್ಬಂದಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.  ನಾಗರಿಕರು ಸಹಾಯಹಸ್ತ ಚಾಚಿದರೆ ಅಪರಾಧ ಪ್ರಕರಣಗಳಿಗೆ ಇನ್ನಷ್ಟು ಕಡಿವಾಣ ಹಾಕಲು ಸಾಧ್ಯ’ ಎಂದರು.

‘ನಗರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ.  ಅವುಗಳನ್ನು ನಿಯಂತ್ರಿಸಲು ಗಸ್ತು ಹೆಚ್ಚಳ, 152 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

ಫೇಸ್‌ಬುಕ್ ಪೇಜ್‌ಗೆ ಚಾಲನೆ:  ನಗರದ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ವ್ಯಾಪ್ತಿಗೆ ಒಳಪಡುವ 16 ಪೊಲೀಸ್ ಠಾಣೆಗಳ ಪ್ರತ್ಯೇಕ ಫೇಸ್‌ಬುಕ್‌ ಪೇಜ್‌ಗಳಿಗೆ ಇದೇ ವೇಳೆ ಚಾಲನೆ ನೀಡಲಾಯಿತು.  ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ಟನಾಯಕ್, ನಿವೃತ್ತ ಡಿಜಿಪಿ ಗರುಡಾಚಾರ್, ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.