ADVERTISEMENT

ಪೊಲೀಸರ ಕಾರ್ಯವೈಖರಿಗೆ ಕಮಿಷನರ್ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:45 IST
Last Updated 9 ಏಪ್ರಿಲ್ 2013, 19:45 IST

ಬೆಂಗಳೂರು: ಚಾಮರಾಜಪೇಟೆಯಲ್ಲಿ ಸೋಮವಾರ ನಡೆದ ಮಂಜುನಾಥ್ (30) ಕೊಲೆ ಪ್ರಕರಣದ ಆರೋಪಿಗಳನ್ನು ಘಟನೆ ನಡೆದ ಕೆಲವೇ ತಾಸುಗಳಲ್ಲಿ ಬಂಧಿಸಿದ ಪೊಲೀಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರು ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಿದ್ದಾರೆ.

ಚಾಮರಾಜಪೇಟೆ ಠಾಣೆಯ ಕಾನ್‌ಸ್ಟೆಬಲ್ ಕೆ.ಜಿ.ಮಂಜುನಾಥ್, ಹೊಯ್ಸಳ ವಾಹನದ ಎಎಸ್‌ಐ ನಾಗರಾಜ್ ಮತ್ತು ಚಾಲಕ ರಘು ಅವರು ಕೊಲೆ ಘಟನೆ ನಡೆದ ಕೂಡಲೇ ಕಾರ್ಯೋನ್ಮುಖರಾಗಿ ಆರೋಪಿಗಳನ್ನು ಬಂಧಿಸಿದ ಕಾರ್ಯ ಶ್ಲಾಘನೀಯ ಎಂದು ಔರಾದಕರ್  ತಿಳಿಸಿದ್ದಾರೆ.

ಬೈಕ್‌ನಲ್ಲಿ ಜಿಮ್ ಸೆಂಟರ್‌ಗೆ ಹೋಗುತ್ತಿದ್ದ ಮಂಜುನಾಥ್ ಅವರನ್ನು ದುಷ್ಕರ್ಮಿಗಳು ಚಾಮರಾಜಪೇಟೆ ಒಂಬತ್ತನೇ ಅಡ್ಡರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಇಬ್ಬರ ಬಂಧನ:  ಪ್ರಕರಣ ಸಂಬಂಧ ಪೊಲೀಸರು, ಕುಮಾರ್ (25) ಮತ್ತು ಲೋಕೇಶ್ (20) ಎಂಬುವರನ್ನು ಮಂಗಳವಾರ ಬಂಧಿಸಿದ್ದಾರೆ.

ಮಂಜುನಾಥ್ ಮತ್ತು ಕುಮಾರ್ ಹಿಂದೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿತ್ತು. ಈ  ಹಿನ್ನೆಲೆಯಲ್ಲಿ ಪೂಜೇಗೌಡನ ಜತೆ ಸೇರಿ ಮಂಜುನಾಥ್ ಕೊಲೆಗೆ ಸಂಚು ರೂಪಿಸಿದ್ದಾಗಿ ಕುಮಾರ್ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.