ADVERTISEMENT

ಪೊಲೀಸ್ ಮೇಲೆ ಹಲ್ಲೆ: ದಂಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಸಂಬಂಧ ಪ್ರಕರಣ ದಾಖಲಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಕೋಲ್ಕತ್ತ ಮೂಲದ ದಂಪತಿ ಹಲ್ಲೆ ನಡೆಸಿರುವ ಘಟನೆ ನಗರದ ಶಿಕಾರಿಪಾಳ್ಯ ರಸ್ತೆಯ ವಿಪ್ರೊ ಜಂಕ್ಷನ್ ಬಳಿ ಶನಿವಾರ ರಾತ್ರಿ ನಡೆದಿದೆ.

ಹಲ್ಲೆ ನಡೆಸಿರುವ ಶಿಕಾರಿಪಾಳ್ಯ ನಿವಾಸಿ ಅಭಿಜಿತ್ ಹಾಗೂ ಅವರ ಪತ್ನಿ ಪಿಂಪಿ ಮುನ್ನಾ ಅವರನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಎಲೆಕ್ಟ್ರಾನಿಕ್ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮೂರ್ತಿ ಮತ್ತು ಕಾನ್‌ಸ್ಟೇಬಲ್ ಶಿವಾನಂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರ್ತಿ, ಶಿವಾನಂದ್ ಹಾಗೂ ಇತರೆ ಸಿಬ್ಬಂದಿ ರಾತ್ರಿ 12 ಗಂಟೆ ಸುಮಾರಿಗೆ ವಿಪ್ರೊ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬಂದ ಅಭಿಜಿತ್‌ರ ವಾಹನವನ್ನು ತಡೆದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಅವರು ಪಾನಮತ್ತರಾಗಿ ಚಾಲನೆ ಮಾಡುತ್ತಿದ್ದ ಸಂಗತಿ ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದರು. ಇದರಿಂದ ಕೋಪಗೊಂಡ ಅಭಿಜಿತ್ ದಂಪತಿ, ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

ಈ ದೃಶ್ಯವನ್ನು ಮೂರ್ತಿ ಅವರು ಕ್ಯಾಮೆರಾದಿಂದ ಚಿತ್ರೀಕರಿಸಲು ಮುಂದಾದಾಗ ಆಕ್ರೋಶಗೊಂಡ ಪಿಂಪಿ ಮುನ್ನಾ, ಕ್ಯಾಮೆರಾ ಕಸಿದುಕೊಂಡು ಜಖಂಗೊಳಿಸಿದರು. ಅಲ್ಲದೇ, ಪತಿಯ ಜತೆ ಸೇರಿಕೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಘಟನೆ ವೇಳೆ ಪಿಂಪಿ ಮುನ್ನಾ ಸಹ ಪಾನಮತ್ತರಾಗಿದ್ದರು. ದಂಪತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಭಾನುವಾರ ಬೆಳಿಗ್ಗೆ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಯಿತು. ನ್ಯಾಯಾಧೀ ಶರು ಪಿಂಪಿ ಮುನ್ನಾ ಅವರನ್ನು ಜಾಮೀ ನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದರು. ಅಭಿಜಿತ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂಜುಕೋರರ ಬಂಧನ: ಜೂಜು ಅಡ್ಡೆ ಮೇಲೆ ಭಾನುವಾರ ದಾಳಿ ನಡೆಸಿದ ಕೆಂಗೇರಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

`ಬಂಧಿತರು ಕೆಂಗೇರಿ ಮತ್ತು ಬಿಡದಿ ಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಅವರು ಕೆಂಗೇರಿ ಚೆಕ್ ಪೋಸ್ಟ್ ಬಳಿ ಜೂಜು ಆಡುತ್ತಿದ್ದಾರೆ ಎಂಬ ಬಗ್ಗೆ ದೊರೆತ ಮಾಹಿತಿಯಿಂದ ಕಾರ್ಯಾ ಚರಣೆ ನಡೆಸಲಾಯಿತು. ಬಂಧಿತರಿಂದ 22 ಸಾವಿರ ರೂಪಾಯಿ ನಗದು, 8ಬೈಕ್‌ಗಳು ಹಾಗೂ 9 ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ~ ಎಂದು ಕೆಂಗೇರಿ ಪೊಲೀ ಸರು ಮಾಹಿತಿ ನೀಡಿದರು. ಪ್ರಕರಣ ದಾಖಲಾಗಿದೆ.

ಪರಿಹಾರ: ತ್ಯಾಜ್ಯ ವಿಲೇವಾರಿಗೆ ಹೋದಾಗ ಶನಿವಾರ ಸಂಭವಿಸಿದ ಅಪ ಘಾತದಲ್ಲಿ ಅಸುನೀಗಿದ ಲಾರಿ ಚಾಲಕ ವೆಂಕಟೇಶಯ್ಯ ಅವರ ಕುಟುಂಬಕ್ಕೆ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) 1ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ವೆಂಕಟೇಶಯ್ಯ ಕುಟುಂಬದ ಒಬ್ಬರಿಗೆ ಉದ್ಯೋಗದ ವ್ಯವಸ್ಥೆಯನ್ನೂ ಮಾಡಲಾ ಗುವುದು ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ತಿಳಿಸಿದ್ದಾರೆ.  ತ್ಯಾಜ್ಯ ವಿಲೇವಾರಿ  ಗೊಂದಲ ಬಗೆಹರಿಸಲಾಗಿದ್ದು, ಕಸ ಸಾಗಾಟ ಎಂದಿನಂತೆ ನಡೆದಿದೆ ಎಂದೂ ಮಾಹಿತಿ ನೀಡಿದ್ದಾರೆ. ಭಾನುವಾರ ಸುಮಾರು 360 ಲಾರಿ 3,800 ಟನ್ ತ್ಯಾಜ್ಯವನ್ನು ಸಾಗಿಸಿವೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.