ADVERTISEMENT

ಪೊಲೀಸ್‌ ಸೂಚನೆಗೆ ಖಾಸಗಿ ಶಾಲೆಗಳ ಸಂಘಟನೆಯಿಂದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:47 IST
Last Updated 30 ಅಕ್ಟೋಬರ್ 2018, 19:47 IST

ಬೆಂಗಳೂರು: ಮಕ್ಕಳ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳನ್ನು ಎಲ್ಲ ಖಾಸಗಿ ಶಾಲೆಗಳ ಪ್ರತಿನಿಧಿಗಳು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿನ ಏಕಗವಾಕ್ಷಿ ಕೇಂದ್ರಕ್ಕೆ ಬಂದು ತಿಳಿಸಬೇಕು. ಶಾಲಾ ಸಿಬ್ಬಂದಿ ಮಾಹಿತಿಯನ್ನು ಕಮಿಷನರ್‌ ಕಚೇರಿಯಲ್ಲಿ ನವೀಕರಿಸಲು ₹500 ಶುಲ್ಕ ಕಟ್ಟಬೇಕು ಎಂಬ ನಗರ ಪೊಲೀಸ್‌ ಆಯುಕ್ತರ ಸೂಚನೆಗೆ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕೆಎಎಂಎಸ್‌) ಆಕ್ಷೇಪ ವ್ಯಕ್ತಪಡಿಸಿದೆ.

‘ಈ ಆದೇಶದ ಹಿಂದೆ ಹಣ ಮಾಡುವ ಉದ್ದೇಶವಿದೆ. ಮಕ್ಕಳ ಸುರಕ್ಷತೆಯ ಕಾಳಜಿ ಇರುವ ಆಯುಕ್ತರು ಶಾಲಾ ಸಿಬ್ಬಂದಿಯ ಮಾಹಿತಿಯ ಪರಿಶೀಲನೆಯನ್ನು ಉಚಿತವಾಗಿ ಮಾಡಲಿ’ ಎಂದು ಒತ್ತಾಯಿಸಿದೆ.

‘ಖಾಸಗಿ ಶಾಲೆಗಳಲ್ಲಿ ಅನಾಹುತ ನಡೆದರೆ ಆಡಳಿತ ಮಂಡಳಿಯನ್ನೇ ಹೊಣೆ ಮಾಡುವುದಾದರೆ, ಸರ್ಕಾರಿ ಶಾಲೆಗಳಲ್ಲಿ ಇಂಥದ್ದೇಘಟನೆಗಳು ನಡೆದಾಗ ಇಲಾಖೆಯ ಆಯುಕ್ತ, ಶಿಕ್ಷಣ ಮಂತ್ರಿಯನ್ನು ಹೊಣೆಗಾರಿಕೆ ಮಾಡಿ ಶಿಕ್ಷೆ ಕೊಡುತ್ತೀರಾ’ ಎಂಬ ಪ್ರಶ್ನೆಯನ್ನೂ ಒಕ್ಕೂಟ ಕೇಳಿದೆ.

ADVERTISEMENT

‘ಒಂದು ಬಾರಿ ಶಾಲಾ ಸಿಬ್ಬಂದಿಯ ಮಾಹಿತಿ ಪರಿಶೀಲಿಸಿದ್ದರೆ, ಅದನ್ನು ನವೀಕರಿಸಲು ಒತ್ತಡ ಹೇರಬಾರದು’ ಎಂದು ಒಕ್ಕೂಟ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.