ADVERTISEMENT

ಪ್ರತ್ಯೇಕ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ಬೆಂಗಳೂರು: ಬಾಣಸವಾಡಿ ಹಾಗೂ ರಾಜಾಜಿನಗರ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಬಾಣಸವಾಡಿ ಮುಖ್ಯರಸ್ತೆಯ ಒರಾಯಿನ್ ಮಾಲ್‌ ಈಸ್ಟ್‌ ಬಳಿ ಬೈಕ್‌ಗಳ ನಡುವೆ ಡಿಕ್ಕಿಯಾಗಿ ಎಂ.ಎಸ್.ನಾಗಯ್ಯನಪಾಳ್ಯದ ನಿವಾಸಿ ಜಮೀರ್ ಅಹಮ್ಮದ್ (23) ಮೃತಪಟ್ಟಿದ್ದಾರೆ.

ಮೆಕ್ಯಾನಿಕ್ ಆಗಿದ್ದ ಜಮೀರ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಮಾಲ್‌ ಬಳಿ ಏಕಪಥದಲ್ಲಿ ವೇಗವಾಗಿ ಬೈಕ್‌ನಲ್ಲಿ ಬಂದ ಆಶಿಷ್‌ ಗುದ್ದಿಸಿದ್ದರು. ಕೆಳಗೆ ಬಿದ್ದಿದ್ದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.

ADVERTISEMENT

ಸ್ಥಳದಲ್ಲಿದ್ದವರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜಮೀರ್ ಕೊನೆಯುಸಿರೆಳೆದಿದ್ದಾರೆ. ಆಶಿಷ್‌ ಕಾಲು ಮುರಿದಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ನಿರ್ಲಕ್ಷ್ಯದಿಂದ ಬೈಕ್ ಓಡಿಸಿ ಸಾವಿಗೆ ಕಾರಣರಾದ ಆರೋಪದಡಿ ಆಶಿಷ್‌ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಿದರು.

ಸಿಎ ವಿದ್ಯಾರ್ಥಿ ಸಾವು:

ನಂದಿನಿಲೇಔಟ್‌ನ ಸರಸ್ವತೀಪುರ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬೈಕ್ ಸವಾರ ಹಿಮಾನ್ ಶಾ ಗರ್ಗ್ (20) ಮೃತಪಟ್ಟಿದ್ದಾರೆ.

ಚಾರ್ಟೆಡ್‌ ಅಕೌಂಟೆಂಟ್ (ಸಿಎ) ಓದುತ್ತಿದ್ದ ಹಿಮಾನ್, ಆನಂದ್‌ರಾವ್ ವೃತ್ತದ ಬಳಿಯ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಕಂಪನಿಯಿಂದ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.

ಒಂದು ತಿಂಗಳ ಹಿಂದಷ್ಟೇ ಹಿಮಾನ್‌ ತಂದೆ ಕೇವಲ್‌ ಕಿಶನ್ ಮೃತಪಟ್ಟಿದ್ದರು. ಅದರಿಂದ ಹಿಮಾನ್ ಮಾನಸಿಕವಾಗಿ ಕುಗ್ಗಿದ್ದರು. ಮೃತರ ಅಂಗಾಂಗಗಳನ್ನು ದಾನ ಮಾಡುವುದಾಗಿ ಕುಟುಂಬಸ್ಥರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.