ADVERTISEMENT

ಬಯೋಮೆಟ್ರಿಕ್‌ ಜಾರಿಗೆ ಗುತ್ತಿಗೆದಾರರಿಂದ ಅಡ್ಡಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:58 IST
Last Updated 10 ಅಕ್ಟೋಬರ್ 2017, 19:58 IST

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ಕೆಲ ಗುತ್ತಿಗೆದಾರರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ.

‘ದಕ್ಷಿಣ ವಲಯದ ಕುಮಾರಸ್ವಾಮಿ ಲೇಔಟ್‌ ಹಾಗೂ ಪದ್ಮನಾಭನಗರ ವಾರ್ಡ್‌ನಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ಕೆಲವರು ಅಡ್ಡಿಪಡಿಸಿದ್ದಾರೆ. ಹೊರಗಿನ ವ್ಯಕ್ತಿಗಳು ಇದರಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಬಿಬಿ
ಎಂಪಿ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಮಾರಸ್ವಾಮಿ ಲೇಔಟ್‌, ಪದ್ಮನಾಭನಗರ ವಾರ್ಡ್‌ನ ಸದಸ್ಯರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದರು. ಎಸ್ಮಾ ಜಾರಿ ಆಗಿರುವುದರಿಂದ ಕೆಲಸವನ್ನು ಸ್ಥಗಿತಗೊಳಿಸು
ವಂತಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರಿಂದಾಗಿ ಪೌರಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದರು.

ADVERTISEMENT

‘ಕೆಲ ಗುತ್ತಿಗೆದಾರರು ಪೌರಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ ಪಾವತಿಸಿರುವ ದಾಖಲೆಗಳನ್ನು ಒದಗಿಸಿಲ್ಲ. ಇದರಿಂದ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳ ವೇತನವನ್ನು ಪಾಲಿಕೆ ಪಾವತಿಸಿಲ್ಲ. ಉಳಿದವರಿಗೆ ಬಾಕಿ ವೇತನ ಪಾವತಿಸಲಾಗಿದೆ’ ಎಂದು ಹೇಳಿದರು.

‘ಯಲಹಂಕ ಸಮೀಪದ ಬೆಲ್ಲಹಳ್ಳಿ, ಕಣ್ಣೂರು, ಸಾತನೂರು ಹಾಗೂ ಬಾಗಲೂರು ಕ್ವಾರಿಗಳಲ್ಲಿ ಕಸ ಸುರಿಯದಂತೆ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಇದರಿಂದ 8–10 ದಿನಗಳಿಂದ ಕಸ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿತ್ತು. ನಗರದಲ್ಲಿ ಉತ್ಪತ್ತಿಯಾದ ಹೆಚ್ಚುವರಿ ಕಸವನ್ನು ಒಮ್ಮೆಲೇ ಸಾಗಣೆ ಮಾಡಿದ್ದರಿಂದ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಭೂಭರ್ತಿ ಘಟಕಗಳಲ್ಲಿ ಕಸ ವಿಲೇವಾರಿ ಮಾಡಲು ಕಷ್ಟವಾ
ಗಿತ್ತು. ಒಂದು ಲೋಡ್‌ ಕಸ ವಿಲೇವಾರಿಗೆ 4–5 ಗಂಟೆಗಳು ಹಿಡಿಯುತ್ತಿತ್ತು. ಸದ್ಯಕ್ಕೆ ಕಸ ವಿಲೇವಾರಿ ಸುಸೂತ್ರವಾಗಿ ನಡೆಯುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.