ADVERTISEMENT

ಬೆಂಕಿಗಾಹುತಿಯಾದ ರಸೆಲ್ ಮಾರ್ಕೆಟ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 12:15 IST
Last Updated 25 ಫೆಬ್ರುವರಿ 2012, 12:15 IST

ಬೆಂಗಳೂರು (ಪಿಟಿಐ): ಬೆಂಗಳೂರಿನ ಶಿವಾಜಿನಗರದ ಐತಿಹಾಸಿಕ ರಸೆಲ್ ಮಾರ್ಕೆಟ್‌ ಶನಿವಾರ ಬೆಳಿಗ್ಗೆ ಧಗಧಗನೆ ಹೊತ್ತಿ ಉರಿದು ನೂರಾರು ಅಂಗಡಿಗಳ ಜತೆಗೆ ವ್ಯಾಪಾರಿಗಳ ಬದುಕನ್ನೂ ಆಪೋಶನ ತೆಗೆದುಕೊಂಡಿತು.

 ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆದರೆ ವ್ಯಾಪಾರವನ್ನೇ ನಂಬಿಕೊಂಡಿದ್ದ ನೂರಾರು ಮಂದಿಯ ಬದುಕು ಮಾತ್ರ ಅಕ್ಷರಶ: ಇದರಿಂದ ಬರಿದಾಗಿದೆ.

ಶನಿವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಇಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಬೆಂಕಿ ಸುತ್ತಮುತ್ತಲ ನೂರಾರು ಅಂಗಡಿಗಳಿಗೆ ತನ್ನ ಕೆನ್ನಾಲಿಗೆಯನ್ನು ಚಾಚಿತು. ಕ್ಷಣಾರ್ಧದಲ್ಲಿ ಎಲ್ಲವನ್ನೂ ಸುಟ್ಟು ಭಸ್ಮ ಮಾಡಿತು. ಸುಮಾರು  20 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು.

ಆದಾಗ್ಯೂ 170 ಮಳಿಗೆಗಳು ಸುಟ್ಟು ಕರಕಲಾದವು. ಇದನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳ ಬದುಕೂ ಕರಕಲಾಯಿತು. ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಶಂಕರಲಿಂಗೇಗೌಡ ಭೇಟಿ ನೀಡಿ ನಷ್ಟದ ಅಂದಾಜು ಮಾಡಿ ಅಂಗಡಿಯನ್ನು ಕಳೆದುಕೊಂಡವರಿಗೆ ಪರಿಹಾರ ಘೋಷಣೆ ಮಾಡುವುದಾಗಿ ಪ್ರಕಟಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ. ಪರಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಬಿಜೆಪಿ ನೇತೃತ್ವದ ಬಿಬಿಎಂಪಿ ಆಡಳಿತ ಪುರಾತನ ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಿಸದೆ ಇದ್ದುದೇ ಕಾರಣ ಎಂದು ಆರೋಪಿಸಿ ತಕ್ಷಣವೇ ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

1927ರಲ್ಲಿ ಬ್ರಿಟಿಷರು ಈ ಮಾರುಕಟ್ಟೆಯನ್ನು ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.