ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಪತ್ರಿಕೋದ್ಯಮ ವಿಭಾಗವನ್ನು ಪತ್ರಿಕೋದ್ಯಮ ವಿಭಾಗದೊಂದಿಗೆ ವಿಲೀನಗೊಳಿಸಬಾರದು ಎಂಬುದು ಸೇರಿದಂತೆ ಕೆಲ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿ.ವಿ.ಯ ಸೆಂಟ್ರಲ್ ಕಾಲೇಜಿನ ಆವರಣದ ಕುಲಪತಿಗಳ ಕಚೇರಿಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್.ಅಶೋಕಕುಮಾರ್ ಅವರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಮೌಲ್ಯಮಾಪನ ಕುಲಸಚಿವರಾಗಿ ನೇಮಕವಾದ ಹಿನ್ನೆಲೆಯಲ್ಲಿ ತೆರವಾದ ಹಿನ್ನೆಲೆಯಲ್ಲಿ ಈ ವಿಭಾಗವನ್ನು ಪ್ರೊ.ಜಗದೀಶ್ ಪ್ರಕಾಶ್ ಅವರು ಅಧ್ಯಕ್ಷರಾಗಿರುವ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿಸಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಕುಲಪತಿ ಡಾ.ಎನ್.ಪ್ರಭುದೇವ್ ಅವರು ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿದಾಗ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಬರೆದು ಕೊಟ್ಟರು. ಕುಲಪತಿಗಳು ತಮ್ಮ ಕಚೇರಿಯಿಂದ ಹೊರಟು ನಿಂತಾಗ ಕೆಲವರು ಅವರ ಕಾರಿನ ಅಡಿ ಮಲಗಿದ ಅತಿರೇಕದ ಘಟನೆಯೂ ನಡೆಯಿತು.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರೊಬ್ಬರು, `ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ವಿ.ವಿ. ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದ ಕೆಲ ಹಿತಾಸಕ್ತಿಗಳು ಈ ಪ್ರತಿಭಟನೆಯ ಪ್ರಹಸನ ನಡೆಸಿವೆ. ಎರಡೂ ವಿಭಾಗಗಳು ಒಂದೇ ವಿ.ವಿಗೆ ಸೇರಿದ್ದರೂ ನಮ್ಮ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ಸ್ ವಿಭಾಗದ ಟಿವಿ ಸ್ಟುಡಿಯೊನ ಉಪಯೋಗ ಪಡೆಯಲು ಅವಕಾಶ ನೀಡಿರಲಿಲ್ಲ. ಇಂಥ ತಾರತಮ್ಯವೇಕೆ?~ ಎಂದು ಪ್ರಶ್ನಿಸಿದರು.

ಒಂದು ವೇಳೆ ವಿಭಾಗಗಳ ವಿಲೀನಕ್ಕೆ ಒಪ್ಪಿದರೆ ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ವಿ.ವಿ.ಯಿಂದ ಪಡೆದುಕೊಳ್ಳುತ್ತಿರುವ ಹಣಕ್ಕೆ ಎಲ್ಲಿ ತಡೆ ಬೀಳುತ್ತದೋ ಎಂದು ಹೀಗೆ ಮಾಡಿಸಲಾಗುತ್ತಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.