ADVERTISEMENT

ಭ್ರಷ್ಟಾಚಾರ: ಯುವಜನರಿಂದ ತಡೆ ಸಾಧ್ಯ

ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:32 IST
Last Updated 9 ಡಿಸೆಂಬರ್ 2013, 19:32 IST

ಬೆಂಗಳೂರು: ‘ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ಹೋಗಲಾಡಿಸಲು ಯುವ ಮತದಾರರಿಂದ ಮಾತ್ರ ಸಾಧ್ಯ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

‘ಪಬ್ಲಿಕ್‌ ಅಫೇರ್ಸ್‌ ಸೆಂಟರ್‌’ ನಗರದಲ್ಲಿ  ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾ­ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೆಹಲಿಯ ವಿಧಾನಸಭಾಕ್ಷೇತ್ರದ ಚುನಾವಣೆಯಲ್ಲಿ  ಹಣ, ಹೆಂಡದ ಆಮಿಷವಿಲ್ಲದೇ ಆಮ್ ಆದ್ಮಿ ಪಕ್ಷವು 28 ಸ್ಥಾನ­ಗಳಿಸಲು ಸಾಧ್ಯವಾಗಿರುವುದು ಯುವ ಮತದಾರರಿಂದಲೇ.  ಇದೊಂದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದರು.

‘ಸಾಮಾಜಿಕ ಕಾರ್ಯಕರ್ತರು, ಹಿರಿಯ ಪತ್ರಕರ್ತರು ಹಾಗೂ ನಾಗರಿಕ ಹಕ್ಕಿಗಾಗಿ ದುಡಿಯುವ ಸಂಘಟನೆಗಳ ಸದಸ್ಯ­ರನ್ನು ಒಳಗೊಂಡ ಸಮಿತಿಯನ್ನು ಜಿಲ್ಲೆಗಳಲ್ಲಿ ರಚಿಸಬೇಕು. ಗ್ರಾಮ ಹಾಗೂ ಜಿಲ್ಲೆಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಆಲಿಸಿ, ಲೋಕಾಯುಕ್ತ ಸಂಸ್ಥೆ ಗಮನಕ್ಕೆ ತರುವ ಕಾರ್ಯವನ್ನು ಈ ಸಮಿತಿ ಮಾಡಬೇಕು. ಈ ಬಗ್ಗೆ ಲೋಕಾಯುಕ್ತರೊಂದಿಗೆ ಸದ್ಯದಲ್ಲೇ ಚರ್ಚೆ ನಡೆಸಲಿದ್ದೇನೆ’ ಎಂದು ತಿಳಿಸಿದರು.

‘ರಾಜಕೀಯ ಹಾಗೂ ಚುನಾವಣೆ ವ್ಯವಸ್ಥೆಗಳೆರಡೂ ಶೀಘ್ರಗತಿಯಲ್ಲಿ ಬದಲಾಗಬೇಕು. ಇಲ್ಲವಾದರೆ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಮುಂದುವರಿಯಲು ಸಾಧ್ಯವಾ­ಗುವುದಿಲ್ಲ. ವಿಜ್ಞಾನ ಹಾಗೂ ಸಂಶೋಧನೆಯೆಡೆಗೆ ಮಕ್ಕಳನ್ನು ಸೆಳೆಯುವುದರ ಜತೆಗೆ ನೈತಿಕ ಪ್ರಜ್ಞೆಯನ್ನು ಬೆಳೆಸಬೇಕಿದೆ’ ಎಂದು ಸಲಹೆ ನೀಡಿದರು.

ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸೆಂಟರ್ ಸಂಸ್ಥಾಪಕ ಡಾ.ಸ್ಯಾಮುಯೆಲ್ ಪೌಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.