ADVERTISEMENT

ಮಗುವಿಗೆ ಅನಾರೋಗ್ಯ; ತಂದೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 20:00 IST
Last Updated 21 ಡಿಸೆಂಬರ್ 2013, 20:00 IST

ಬೆಂಗಳೂರು: ಪೀಣ್ಯ ಸಮೀಪದ ಪೈಪ್‌ಲೈನ್‌ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಟಿ.ಕೆ.ಹರೀಶ್‌ (35) ಎಂಬುವರು ನೇಣು ಹಾಕಿಕೊಂಡಿದ್ದು, ರವೀಂದ್ರನಗರದಲ್ಲಿ ಹನುಮಂತಪ್ಪ (42) ಎಂಬ ಪೇಂಟರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ  ತುಮಕೂರಿನವರಾದ ಹರೀಶ್‌, ಪೀಣ್ಯದ ಕಾರ್ಖಾನೆಯೊಂದ-­ರಲ್ಲಿ ಕೆಲಸ ಮಾಡುತ್ತಿದ್ದರು. ಹತ್ತು ವರ್ಷಗಳ ಹಿಂದೆ ಪದ್ಮಾವತಿ ಎಂಬು­ವರನ್ನು ವಿವಾಹವಾಗಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಹರೀಶ್‌, ಶುಕ್ರವಾರ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.

‘ಎರಡು ವರ್ಷದ ಮಗ ಚಿನ್ಮಯ್‌ ಮೂತ್ರಪಿಂಡ ಸಮಸ್ಯೆಯಿಂದ ಬಳಲು­ತ್ತಿದ್ದ. ಶಸ್ತ್ರಚಿಕಿತ್ಸೆ ಮಾಡಿಸಿದರೂ ಆತ ಗುಣಮುಖನಾಗಿರಲಿಲ್ಲ. ವೈದ್ಯರು ಪುನಃ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದರು. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪತಿ, ಈ ವಿಚಾರ ತಿಳಿದು ಸಾಕಷ್ಟು ಖಿನ್ನತೆಗೆ ಒಳಗಾಗಿ­ದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪದ್ಮಾವತಿ ಪೊಲೀಸರಿಗೆ ತಿಳಿಸಿದ್ದಾರೆ.

‘ರಾತ್ರಿ 8ರ ಸುಮಾರಿಗೆ ಮಗಳನ್ನು ಟ್ಯೂಷನ್‌ನಿಂದ ಮನೆಗೆ ಕರೆದು­ಕೊಂಡು ಬರಲು ಹೋಗಿದ್ದೆ. ವಾಪಸ್ ಬಂದಾಗ ಒಳಗಿನಿಂದ ಚಿಲಕ ಹಾಕಿತ್ತು. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಇರಲಿಲ್ಲ. ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ನೋಡಿದಾಗ ಪತಿ ನೇಣು ಹಾಕಿಕೊಂಡಿದ್ದರು’ ಎಂದು ಪದ್ಮಾವತಿ  ಹೇಳಿದ್ದಾರೆ.

ಮತ್ತೊಂದು ಪ್ರಕರಣ: ರವೀಂದ್ರ­ನಗರದ ನಾಲ್ಕನೇ ಅಡ್ಡರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹನು­ಮಂತಪ್ಪ ಮೂಲತಃ ಭದ್ರಾವತಿ­ಯವರು. ಒಂದೂವರೆ ತಿಂಗಳ ಹಿಂದಷ್ಟೆ ನಗರಕ್ಕೆ ಬಂದಿದ್ದ ಅವರು, ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಅವರ ಪತ್ನಿ 15 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು ಎಂದು ಪೀಣ್ಯ ಠಾಣೆಯ ಪೊಲೀಸರು ಹೇಳಿದ್ದಾರೆ.

ವ್ಯಕ್ತಿ ಶವ ಪತ್ತೆ: ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್‌ ಬಳಿ ಶ್ಯಾಮ್‌ (32) ಎಂಬ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತರು ಇದೇ 13ರಂದು ಜಿಂದಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅದರ ರಶೀದಿ ಜೇಬಿನಲ್ಲಿ ಪತ್ತೆಯಾಗಿದೆ. ಆದರೆ, ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಶವವನ್ನು ಸಂಜೀವಿನಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತರ ಸಂಬಂಧಿಕರು ಠಾಣೆಯ ದೂರವಾಣಿ ಸಂಖ್ಯೆಗೆ (0-80---- ----2294-2532) ಕರೆ ಮಾಡಿ ಶವ ಪಡೆಯಬಹುದು ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.