ADVERTISEMENT

ಮಗು ಹತ್ಯೆ ಮಾಡುವ ಬೆದರಿಕೆ....

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು ಅವರ ಮಗುವನ್ನು ಕಿತ್ತುಕೊಂಡ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ ಆಭರಣ ದರೋಡೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಸಮೀಪದ ಎಂಸಿಇಸಿಎಚ್‌ಎಸ್ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.

ಬಸವಲಿಂಗಪ್ಪ ಲೇಔಟ್‌ನ ನಿವಾಸಿ ಮಂಜುಳಾ ಮತ್ತು ಅವರ ಸಹೋದರಿ ಕವಿತಾ ದರೋಡೆಗೊಳಗಾದವರು. ಸಂಪಿಗೆಹಳ್ಳಿಯಲ್ಲಿ ಮಂಜುಳಾ ಅವರ ಅಜ್ಜಿ ಮನೆ ಇದೆ. ಸಹೋದರಿ ಮತ್ತು ಮೂರು ವರ್ಷದ ಮಗ ನಕುಲ್‌ನನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡ ಮಂಜುಳಾ ಅವರು ಅಜ್ಜಿ ಮನೆಗೆ ಹೋಗುತ್ತಿದ್ದರು. ಎಂಬತ್ತು ಅಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರ ವಾಹನದ ಎದುರಿಗೆ ಬಂದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ `ವಾಹನದಿಂದ ಏನೋ ಬಿತ್ತು~ ನೋಡಿ ಎಂದಿದ್ದಾನೆ.

ಇದನ್ನು ನಂಬಿದ ಮಂಜುಳಾ ಅವರು ವಾಹನ ನಿಲ್ಲಿಸಿದಾಗ ಕಾರಿನಿಂದ ಕೆಳಗಿಳಿದ ಮೂರು ಮಂದಿ ದುಷ್ಕರ್ಮಿಗಳು ಏಕಾಏಕಿ ನಕುಲ್‌ನನ್ನು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಚಿನ್ನಾಭರಣ ನೀಡದಿದ್ದರೆ ಕೊಲೆ ಮಾಡುವುದಾಗಿ ಚಾಕುವನ್ನು ಮಗುವಿನ ಕುತ್ತಿಗೆಗೆ ಹಿಡಿದಿದ್ದಾರೆ.

ಇದರಿಂದ ಆತಂಕಗೊಂಡ ಮಂಜುಳಾ ಮತ್ತು ಕವಿತಾ ಆಭರಣಗಳನ್ನು ಕೊಟ್ಟು ಮಗುವನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಆಭರಣ ದರೋಡೆ ಮಾಡಿದ್ದಾರೆ. ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.