ಬೆಂಗಳೂರು:‘ಉನ್ನತವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ಸಮುದಾಯಗಳಲ್ಲಿ ಮತಾಂತರ ನಡೆಸುವುದು ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದು ಬೌದ್ಧರ ಧರ್ಮ ಗುರು ದಲೈ ಲಾಮಾ ಕಿವಿಮಾತು ಹೇಳಿದರು.
ಇಲ್ಲಿನ ಬಿಷಪ್ ಕಾಟನ್ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಭಾರತದ ಆಂಗ್ಲೊ–ಇಂಡಿಯನ್ ಶಾಲೆಗಳ ಪ್ರಾಂಶುಪಾಲರ 92ನೇ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯ ಅತ್ಯುತ್ಕೃಷ್ಟ ಸೇವೆ ಸಲ್ಲಿಸಿದೆ’ ಎಂದು ಶ್ಲಾಘಿಸಿದರು.
‘ಮತಾಂತರ ಸರಿಯಲ್ಲ ಎಂದು ನಾನು ಮಂಗೋಲಿಯಾದ ಕೆಲವು ಕ್ರೈಸ್ತ ಮಿಷನರಿಗಳಿಗೂ ಹೇಳಿದ್ದೇನೆ. ಮಂಗೋಲಿಯಾ ಬೌದ್ಧ ರಾಷ್ಟ್ರ. ಅಲ್ಲಿ ಮತಾಂತರ ಸರಿಯಲ್ಲ ಎಂಬುದು ನನ್ನ ನಿಲುವು’ ಎಂದರು.
‘ಬೌದ್ಧೇತರ ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಪ್ರಚಾರಕ್ಕೆ ನಾನು ಎಂದೂ ಪ್ರಯತ್ನಿಸಿಲ್ಲ. ಕೆಲವು ಮಿಷನರಿಗಳು ಈ ಕಾರ್ಯಕ್ಕೆ ಯತ್ನಿಸಿವೆ. ಇದು ಸರಿಯಲ್ಲ’ ಎಂದು ದಲೈ ಲಾಮಾ ನುಡಿದರು.
ಶಿಕ್ಷಣದಲ್ಲಿ ಬದಲಾವಣೆ: ‘ಒಬ್ಬ ವ್ಯಕ್ತಿ ಒಂದು ನೌಕರಿಗೆ ಸೇರಿದ ನಂತರ, ಜೀವನಪರ್ಯಂತ ಅಲ್ಲೇ ಕೆಲಸ ಮಾಡುತ್ತಾನೆ ಎಂಬ ಸನ್ನಿವೇಶ ಈಗ ಇಲ್ಲ. ಬದಲಾಗುತ್ತಿರುವ ಕಾಲದ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಸಂಶೋಧನೆಯ ಮನೋಭಾವವನ್ನು ಇಂದಿನ ಶಿಕ್ಷಣ ರೂಪಿಸಬೇಕು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಆಧಾರ್) ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದರು.
‘ದೇಶದಲ್ಲಿ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.