ADVERTISEMENT

ಮಧ್ಯ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:10 IST
Last Updated 21 ಫೆಬ್ರುವರಿ 2011, 20:10 IST

ಬೆಂಗಳೂರು: ‘ಕರ್ನಾಟಕದ ಮಧ್ಯ ಭಾಗದಲ್ಲಿ ಜನಪದ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈ ಸಂಬಂಧ ಈ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಪಡಿಸಿದ್ದಾರೆ.

‘ವಿ.ವಿ ಸ್ಥಾಪನೆಗೆ ಕನಿಷ್ಠ 500 ಎಕರೆ ಜಾಗ ಬೇಕಾಗಿದೆ. ಹೀಗಾಗಿ ಹಾವೇರಿಯಲ್ಲಿ ಜಾಗ ಸಿಗಲಿದ್ದು, ಅಲ್ಲೇ ವಿಶ್ವವಿದ್ಯಾಲಯ ಸ್ಥಾಪಿಸುವುದು ಸೂಕ್ತ’ ಎಂದು ಹೇಳಿದರು.ಮುನ್ನೂರಕ್ಕೂ ಹೆಚ್ಚು ಜನಪದ ಕಲೆಗಳು ಜೀವಂತವಾಗಿದ್ದರೂ ವಿನಾಶದ ಅಂಚಿನಲ್ಲಿ ಇವೆ. ಇದೇ ಕಾಲಘಟ್ಟದಲ್ಲಿ 500ಕ್ಕೂ ಹೆಚ್ಚು ಕಲೆಗಳು ನಾಶವಾಗಿವೆ.

ಇವೆಲ್ಲಕ್ಕೂ ಪುನಶ್ಚೇತನ ನೀಡುವುದಕ್ಕೆ ಜನಪದ ವಿಶ್ವವಿದ್ಯಾಲಯದಂತಹ ಸಂಸ್ಥೆ ಅಗತ್ಯ ಎಂದು ವಿವರಿಸಿದರು. ಕೇವಲ ಘೋಷಣೆಯಿಂದ ಎಲ್ಲವೂ ಈಡೇರುವುದಿಲ್ಲ. ಕನಿಷ್ಠ 100  ಕೋಟಿ ರೂಪಾಯಿ ಮೀಸಲಿಡಬೇಕು ಎಂದೂ ಅವರು ಒತ್ತಾಯಿಸಿದರು.

ನುಡಿತೇರು: ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರಕವಾಗಿ ಕನ್ನಡ ನುಡಿತೇರು-ಜಾಗೃತಿ ಜಾಥಾ ಮಂಗಳವಾರದಿಂದ  ಫೆ.27ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ನಂದಗಡದಿಂದ ಜಾಥಾಕ್ಕೆ ಚಾಲನೆ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಉಮೇಶ್ ಕತ್ತಿ, ಸಹಕಾರ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿರುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.