ADVERTISEMENT

ಮರ್ಮಾಂಗಕ್ಕೆ ಕತ್ತರಿ ಪ್ರಕರಣ: ವೈದ್ಯೆಗೆ ತಾತ್ಕಾಲಿಕ ನಿರಾಳ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು: ತನ್ನ ಪ್ರಿಯಕರ ಬೇರೊಂದು ವಿವಾಹವಾಗಲು ಹೊರಟಿದ್ದ ಕಾರಣ, ಅವರ ಮರ್ಮಾಂಗಕ್ಕೇ ಕತ್ತರಿ ಹಾಕಿದ ದಂತ ವೈದ್ಯೆ ವಿರುದ್ಧ ದಾಖಲು ಮಾಡಲಾದ ದೋಷಾರೋಪ ಪಟ್ಟಿ ಪುನರ್ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಇಲ್ಲಿನ ಸೆಷನ್ಸ್ ಕೋರ್ಟ್‌ಗೆ ಸೋಮವಾರ ಆದೇಶಿಸಿದೆ.

ಡಾ. ಹರ್ಷದ್ ಅಲಿ ಅವರ ಮರ್ಮಾಂಗ ಕತ್ತರಿಸಿರುವ ಆರೋಪವನ್ನು ಡಾ. ಸಯೀದಾ ಅಮೀನಾ ನಹೀಮ್ ಎದುರಿಸುತ್ತಿದ್ದಾರೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವೈದ್ಯೆ ಈಗ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

ಪ್ರಕರಣ ವಿವರ: ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹರ್ಷದ್ ಅವರು ಬೇರೊಂದು ವಿವಾಹ ಆಗುತ್ತಿದ್ದಾರೆ ಎಂಬ ಸುದ್ದಿ ಸಯೀದಾ ಅವರಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಮದ್ಯದಲ್ಲಿ ಮತ್ತು ಬರಿಸುವ ಔಷಧ ಸೇರಿಸಿ, 2008ರ ನವೆಂಬರ್ 8 ರಂದು ಈ ಕೃತ್ಯ ಎಸಗಿದ್ದಾರೆ ಎನ್ನುವುದು ಆರೋಪ.

ಭಾರತೀಯ ದಂಡ ಸಂಹಿತೆಯ 327 (ಗಂಭೀರ ಗಾಯ) ಹಾಗೂ 307 (ಕೊಲೆ ಯತ್ನ) ಅಡಿ ಸಯೀದಾ ವಿರುದ್ಧ ದೂರು ದಾಖಲಾಯಿತು. ದೋಷಾರೋಪ ಪಟ್ಟಿ ದಾಖಲು ಮಾಡಲಾಗಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಎರಡು ಕಲಮುಗಳ ಅಡಿ ಒಂದೇ ಬಾರಿ ದೂರು ದಾಖಲು ಮಾಡಿರುವುದು ಕಾನೂನುಬಾಹಿರ. ಆದುದರಿಂದ ದೋಷಾರೋಪ ಪಟ್ಟಿ ರದ್ದು ಮಾಡಬೇಕು ಎಂದು ಸಯೀದಾ ಪರ ವಕೀಲ ಶಂಕರಪ್ಪಕೋರ್ಟ್ ಅನ್ನು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರು, ದೋಷಾರೋಪ ಪಟ್ಟಿಗೆ ಸಂಬಂಧಿಸಿದಂತೆ ಮರು ಪರಿಶೀಲನೆ ನಡೆಸುವಂತೆ ಅಧೀನ ಕೋರ್ಟ್‌ಗೆ ಸೂಚಿಸಿ ಪ್ರಕರಣ ಇತ್ಯರ್ಥಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.