ಹೊಸಕೋಟೆ: ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಸಂತೇ ಮೈದಾನದ ಬಳಿಯಿದ್ದ ಬೃಹತ್ ಮರವೊಂದು ಭಾನುವಾರ ರಾತ್ರಿ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಮತ್ತಿಬ್ಬರಿಗೆ ಗಾಯಗಳಾಗಿವೆ.
ತೀವ್ರ ಗಾಯಗೊಂಡ ಲಕ್ಷ್ಮಮ್ಮ(40) ಅವರನ್ನು ಹೊಸಕೋಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟರು. ಅವರ ಪತಿ ನರಸಿಂಹಮೂರ್ತಿ ಎಂಬುವವರ ಕಾಲು ಮೂಳೆ ಮುರಿದಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಸೂಲಿಬೆಲೆಯವರಾದ ಇವರಿಬ್ಬರು ಸಣ್ಣವ್ಯಾಪಾರಸ್ಥರಾಗಿದ್ದು ಸಂತೇ ವ್ಯಾಪಾರಕ್ಕೆ ಬಂದಿದ್ದರು. ಮರದ ಕೆಳಗಿದ್ದ ಕ್ಯಾಂಟರ್ ವಾಹನವೊಂದು ಜಖಂಗೊಂಡಿದೆ. ಭಾನುವಾರ ಸಂತೇ ದಿನವಾಗಿದ್ದು ಹೆಚ್ಚಿನ ಜನ ಮರದ ಬಳಿ ವ್ಯಾಪಾರ ವಹಿವಾಟಿಗೆ ಸೇರುತ್ತಿದ್ದರು. ಕತ್ತಲಾಗಿದ್ದರಿಂದ ಜನ ಚದುರಿದ್ದು ಅದೃಷ್ಟವಶಾತ್ ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ.
ಮರದ ಒಂದು ಭಾಗದ ಕೊಂಬೆಗಳನ್ನು ಈಚೆಗೆ ಕಡಿದಿದ್ದೇ ಮರ ಉರುಳಲು ಕಾರಣ ಎನ್ನಲಾಗಿದೆ. ಮೃತ ಲಕ್ಷ್ಮಮ್ಮನ ಕುಟುಂಬದವರಿಗೆ ಸರ್ಕಾರದಿಂದ ನೀಡಿದ 1.50ಲಕ್ಷ ರೂಪಾಯಿ ಪರಿಹಾರದ ಚೆಕ್ನ್ನು ಶಾಸಕ ಎನ್.ನಾಗರಾಜು ಸೋಮವಾರ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.