ಬೆಂಗಳೂರು: `ಸರ್ಕಾರ ಮಾಂಸ ಮಾರಾಟ ನಿಷೇಧವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು~ ಎಂದು ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ ಸರ್ಕಾರವನ್ನು ಆಗ್ರಹ ಪಡಿಸಿದರು.
ಸೋಮವಾರ ನಗರದಲ್ಲಿ ನ್ಯಾಯಕ್ಕಾಗಿ ನಾವು ಸಂಘಟನೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಸರ್ಕಾರವು ಸರ್ವೋದಯ ದಿನ, ಮಹಾಶಿವರಾತ್ರಿ, ಶ್ರೀರಾಮ ನವಮಿ, ಮಹಾವೀರ ಜಯಂತಿ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಬುದ್ದ ಪೂರ್ಣಿಮಾ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಗಾಂಧಿ ಜಯಂತಿ ದಿನಗಳಂದು ಮಾಂಸ ಮಾರಾಟವನ್ನು ನಿಷೇಧಿಸಿದೆ. ಇದು ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಆಡಳಿತವನ್ನು ನಡೆಸುತ್ತಿರುವ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ~ ಎಂದರು.
ನ್ಯಾಯಕ್ಕಾಗಿ ನಾವು ಸಂಘಟನೆ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್ ಮಾತನಾಡಿ, `ಹಿಂದೂ ಧರ್ಮದಲ್ಲಿ ಮಾಂಸವನ್ನು ಸೇವಿಸುವವರ ಪ್ರಮಾಣ ಅಧಿಕವಾಗಿದ್ದು, ಮಾಂಸಹಾರಿಗಳ ಮೇಲೆ ದಾಳಿ ಮಾಡಲು ಹೋರಟಿದೆ. ನಿಷೇಧದಿಂದ ಮಾಂಸ ಮಾರಾಟಗಾರರ ಬದುಕು ಅಂತಂತ್ರರಾಗುವರಿಂದಾಗಿ ಸರ್ಕಾರ ನಿಷೇಧವನ್ನು ಬಿಡಬೇಕು~ ಎಂದು ಹೇಳಿದರು..
ಸರ್ಕಾರವನ್ನು ಎಚ್ಚರಿಸಲು ಅಂಬೇಡ್ಕರ್ ದಿನಾಚರಣೆಯಂದು ಮಾಂಸವನ್ನು ಸೇವಿಸಿ ಹೋರಾಟವನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರುನಾಡ ಸೇನೆ ರಾಜ್ಯ ಅಧ್ಯಕ್ಷ ಪಟಾಪಟ್ ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.