ADVERTISEMENT

ಮಾದಿಗ ಸಮುದಾಯದವರಿಗೆ ಟಿಕೆಟ್- ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:53 IST
Last Updated 2 ಏಪ್ರಿಲ್ 2013, 19:53 IST

ಬೆಂಗಳೂರು:  ರಾಜ್ಯದಲ್ಲಿ ಮಾದಿಗ ಸಮುದಾಯದ ಜನರು ಹೆಚ್ಚಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ಪ್ರತಿನಿಧಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಮಾದಿಗರ ಯುವ ಸೇನೆಯು ಒತ್ತಾಯಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಅವರು, `ಕಾಂಗ್ರೆಸ್ ಪಕ್ಷವು ನಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡದಿದ್ದರೆ, ಸಂಘಟನೆಯಿಂದ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಪ್ರಚಾರ ಮಾಡಲಾಗುವುದು' ಎಂದು ಹೇಳಿದರು.

`ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯ ಕಡೆಗಣಿಸಿದರೆ ಅವನತಿಯತ್ತ ಸಾಗಬೇಕಾಗುತ್ತದೆ. ಆದ್ದರಿಂದ, ಮಾದಿಗ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು' ಎಂದು ಆಗ್ರಹಿಸಿದರು.

ಎನ್‌ಪಿಪಿ ಸ್ಪರ್ಧೆ
ಬೆಂಗಳೂರು
:  `ನ್ಯಾಷನಲ್ ಪೀಪಲ್ ಪಾರ್ಟಿ'ಯ (ಎನ್‌ಪಿಪಿ) ರಾಷ್ಟ್ರೀಯ ಕಾರ್ಯದರ್ಶಿ ಅಲೋಕ್ ಕುಮಾರ್ ಗೋಯಲ್ ಅವರು ಪಕ್ಷದ ರಾಜ್ಯ ಘಟಕವನ್ನು ಇಲ್ಲಿ ಮಂಗಳವಾರ ಉದ್ಘಾಟಿಸಿದರು, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿರುವವರ ಹೆಸರು ಪ್ರಕಟಿಸಿದರು.

ಪಕ್ಷದ ರಾಜ್ಯಘಟಕದ ಅಧ್ಯಕ್ಷರಾಗಿ ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜೇಂದ್ರ, ಮಹಿಳಾ ಸಂಚಾಲಕಿ ಆಗಿ ಅನುಪಮ ಕಾನ್ಸೋ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ: ಸಾಗರ- ಎಚ್.ವಿ.ಮಂಗಳಗೌರಿ, ಸೊರಬ- ಎನ್.ಬಿ.ಮೃತ್ಯುಂಜಯ, ಶಿಕಾರಿಪುರ- ಎಸ್.ಬಿ. ರಾಜೇಶ್, ತೀರ್ಥಹಳ್ಳಿ- ಕೆ.ಜಿ.ಸ್ವಾಮಿ, ಶಿವಮೊಗ್ಗ- ವೀರಬಸಪ್ಪ, ಶಿವಮೊಗ್ಗ ಗ್ರಾಮೀಣ- ಎಂ.ಶ್ರೀನಿವಾಸ, ಭದ್ರಾವತಿ- ಎಂ.ಮಧುಮತಿ. ಪುಲಕೇಶಿ ನಗರ- ಸುನೀಲ್, ಚಾಮರಾಜಪೇಟೆ- ಸೈಯದ್ ಅಸ್ಲಂ, ಭಾರತೀನಗರ- ಎಸ್.ಕೆ.ಸುಹೇಲ್, ಸರ್ವಜ್ಞನಗರ- ಡಾ.ಏಸು ಜೆರಾಲ್ಡ್.

ಜೆಡಿಯು ಸಭೆ

ಬೆಂಗಳೂರು
:  `ಜನತಾ ದಳ (ಸಂಯುಕ್ತ) ಪಕ್ಷದ ರಾಜ್ಯ ಪರಿಷತ್ ಸದಸ್ಯರ ಸಭೆ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೆಂಗಳೂರಿನಲ್ಲಿ ಬುಧವಾರ ನಡೆಯಲಿದೆ' ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾತ್ಸವ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ, ಹಾಲಿ ಅಧ್ಯಕ್ಷ ಎಂ.ಪಿ. ನಾಡಗೌಡ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಜಿ.ವಿ. ರಾಮಚಂದ್ರಯ್ಯ ಸ್ಪರ್ಧಿಸಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.