ADVERTISEMENT

ಮುಖ್ಯ ಕಾರ್ಯದರ್ಶಿಗಳ ಕಚೇರಿ ಜಪ್ತಿ: ಮುಜುಗರದಿಂದ ಪಾರು!

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ ಹಣವನ್ನು ಇನ್ನು 10 ದಿನಗಳಲ್ಲಿ ಪಾವತಿ ಮಾಡುವುದಾಗಿ ಕೃಷಿಕ ಪಿ. ಅಶ್ವತ್ಥನಾರಾಯಣ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಮೂಲಕ ಜಪ್ತಿಯಾಗುವ ಮುಜುಗರದ ಸನ್ನಿವೇಶದಿಂದ ಮುಖ್ಯ ಕಾರ್ಯದರ್ಶಿಗಳ ಕಚೇರಿ ಪಾರಾಗಿದೆ!

`ಅಶ್ವತ್ಥನಾರಾಯಣ ಅವರಿಗೆ ನೀಡಬೇಕಿರುವ ಪರಿಹಾರದ ಹಣವನ್ನು ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಚರಾಸ್ತಿಯನ್ನು ಜಪ್ತಿ ಮಾಡಿ ಪಡೆಯುವಂತೆ ನಗರ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಗೆ ಮಂಗಳವಾರ ತೆರಳಿದ್ದ ನ್ಯಾಯಾಲಯದ ಸಹಾಯಕರಿಗೆ (ಕೋರ್ಟ್ ಅಮಿನ್) ಎಸ್.ವಿ. ರಂಗನಾಥ್ ಅವರ ಆಪ್ತ ಕಾರ್ಯದರ್ಶಿಗಳು ಲಿಖಿತ ಭರವಸೆ ನೀಡಿದ್ದಾರೆ~ ಎಂದು ಅಶ್ವತ್ಥನಾರಾಯಣ ಪರ ವಕೀಲ ಎನ್. ನಾಗರಾಜ ತಿಳಿಸಿದರು.

`ನನಗೆ ಬರಬೇಕಿರುವ ಪರಿಹಾರದ ಹಣವನ್ನು ಹತ್ತು ದಿನಗಳಲ್ಲಿ ಪಾವತಿ ಮಾಡದಿದ್ದರೆ, ಸಿವಿಲ್ ನ್ಯಾಯಾಲಯ ನೀಡಿರುವ ಆದೇಶವನ್ನೇ ಮುಂದಿಟ್ಟುಕೊಂಡು ಜಪ್ತಿಗೆ ಮತ್ತೊಮ್ಮೆ ಮುಂದಾಗುವೆ~ ಎಂದು ಅಶ್ವತ್ಥನಾರಾಯಣ ಹೇಳಿದರು.

ADVERTISEMENT

ಏನಿದು ಪ್ರಕರಣ?: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿನ ದೊಡ್ಡಬಿದರೆ ಹೋಬಳಿಯ ಕಟ್ಟಗೊಲ್ಲಹಳ್ಳಿಯಲ್ಲಿ 1993-94ರಲ್ಲಿ ಭೂಸ್ವಾಧೀನ ಮಾಡಿಕೊಂಡಿತ್ತು. ಅದರಲ್ಲಿ ಅಶ್ವತ್ಥನಾರಾಯಣ ಅವರಿಗೆ ಸೇರಿದ ಎರಡು ಎಕರೆ ಭೂಮಿಯೂ ಸೇರಿತ್ತು.

`ಎಕರೆಗೆ 60 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಆಗ ಸರ್ಕಾರ ಹೇಳಿತ್ತು. ಆದರೆ ಇದು ಕಡಿಮೆಯಾಯಿತು ಎಂದು ನಾವು ನ್ಯಾಯಾಲಯದ ಮೊರೆ ಹೋದೆವು. ನಮ್ಮ ಮನವಿ ಆಲಿಸಿದ ನ್ಯಾಯಾಲಯ, ಎಕರೆಗೆ 3.15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು~ ಎಂದು ನಾಗರಾಜ ಹೇಳಿದರು.

`ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಮತ್ತು ಡಿಆರ್‌ಡಿಒ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಆದರೆ ಎಕರೆಗೆ ಏಳು ಲಕ್ಷ ರೂಪಾಯಿ ಮತ್ತು ಬಡ್ಡಿಯನ್ನು ಪರಿಹಾರ ರೂಪದಲ್ಲಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.