ADVERTISEMENT

ಮುಷ್ಕರ: ಬೋನಸ್ ತಡೆಯುವುದು ಸಲ್ಲ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: ಕಂಪೆನಿಗಳಲ್ಲಿ ಕಾನೂನುಬಾಹಿರವಾಗಿ ಮುಷ್ಕರ ಮಾಡಿದರೆ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ ಅನ್ವಯ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆ ವಿನಾ ಅವರ ಬೋನಸನ್ನು ತಡೆಹಿಡಿಯುವುದು ಸರಿಯಲ್ಲ ಎಂದು ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಪೀಣ್ಯದ ಬಳಿಯ `ಭಾರತ್ ಫ್ರಿಟ್ಜ್ ವೆರ್ನರ್~ ಕಂಪೆನಿಯ ಉದ್ಯೋಗಿಗಳಿಗೆ 1996ರಿಂದ 1998ರವರೆಗೆ ತಡೆಹಿಡಿಯಲಾಗಿರುವ ಬೋನಸನ್ನು ಇನ್ನು ಆರು ವಾರಗಳಲ್ಲಿ ನೀಡುವಂತೆ ಆದೇಶಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವರೆಲ್ಲ ಕಾನೂನುಬಾಹಿರವಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರ ಬೋನಸನ್ನು ತಡೆಹಿಡಿಯಲಾಗಿತ್ತು. ಬೋನಸ್ ನೀಡಲು ನಿರಾಕರಿಸಿದ ಕಂಪೆನಿ ಹಾಗೂ ಕಂಪೆನಿ ಕ್ರಮ ಎತ್ತಿಹಿಡಿದ ಕೈಗಾರಿಕಾ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.

`ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಎನ್ನುವುದು ಕಾರ್ಮಿಕರಿಗೆ ಆಯುಧ ಇದ್ದಂತೆ. ಆದರೆ ಈ ರೀತಿ ಮುಷ್ಕರ ಮಾಡಿರುವುದು ಕಾನೂನುಬದ್ಧವೇ ಅಲ್ಲವೇ ಎಂಬುದನ್ನು ತೀರ್ಮಾನಿಸುವುದು ನ್ಯಾಯಮಂಡಳಿ ಕರ್ತವ್ಯವಲ್ಲ. ಇದನ್ನು ಕಾನೂನುಬಾಹಿರ ಎಂದು ಹೇಳಿ ಅವರಿಗೆ ಸಿಗಬೇಕಾದ ಬೋನಸ್ ನೀಡದಂತೆ ಕಂಪೆನಿಗೆ ಆದೇಶಿಸಿರುವುದು ಉಚಿತವಲ್ಲ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

`ಕೆಲವರಿಗೆ ಬೋನಸ್ ನೀಡುವುದು, ಇನ್ನು ಕೆಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣ ನೀಡಿ ಅವರಿಗೆ ನೀಡದೇ ಇರುವುದು ಉಚಿತವಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಮಡೆಸ್ನಾನ: ವಿಚಾರಣೆ ಮುಂದೂಡಿಕೆ
ಊಟ ಮಾಡಿ ಬಿಟ್ಟ ಎಂಜಲು ಎಲೆಗಳ ಮೇಲೆ ಉರುಳಾಡಿ ಹರಕೆ ತೀರಿಸುವ `ಮಡೆ ಸ್ನಾನ~ ಪದ್ಧತಿಯನ್ನು ಇನ್ನು ಎರಡು ತಿಂಗಳಿನಲ್ಲಿ ನಿರ್ಮೂಲನೆ ಮಾಡಲಾಗುವುದು ಎಂಬ ಮುಖ್ಯಮಂತ್ರಿಗಳ ಭರವಸೆಯನ್ನು ಹೈಕೋರ್ಟ್‌ಗೆ ಮಂಗಳವಾರ ಸರ್ಕಾರ ತಿಳಿಸಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಈ ಪದ್ಧತಿ ರದ್ದತಿಗೆ ಕೋರಿ ಹಲವು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಈ ಮಾಹಿತಿಯನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಎರಡು ತಿಂಗಳು ಮುಂದೂಡಿದೆ.

ಜಟಾಪಟಿ: ವಸ್ತುಸ್ಥಿತಿಗೆ ಆದೇಶ
ಪೊಲೀಸರು, ವಕೀಲರು ಹಾಗೂ ಮಾಧ್ಯಮದವರ ನಡುವೆ ಮಾರ್ಚ್ 2ರಂದು ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿರುವ ಜಟಾಪಟಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.

ಪೊಲೀಸರು ಹಾಗೂ ಮಾಧ್ಯಮದವರ ವಿರುದ್ಧ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಕೀಲರು ಸಲ್ಲಿಸಿದ್ದಾರೆ. ಪ್ರತ್ಯೇಕ ಅರ್ಜಿಗಳು ಇರುವ ಕಾರಣ, ಗೊಂದಲ ಮೂಡಿಸುವ ಹಿನ್ನೆಲೆಯಲ್ಲಿ ಈ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ಒಂದೇ ಅರ್ಜಿ ಸಲ್ಲಿಸುವಂತೆ ಕಳೆದ ಬಾರಿಯೇ ಕೋರ್ಟ್ ನಿರ್ದೇಶಿಸಿದ್ದರೂ, ಅರ್ಜಿದಾರ ವಕೀಲರು ಆದೇಶ ಪಾಲನೆ ಮಾಡಿಲ್ಲ. ಆದುದರಿಂದ ಮುಂದಿನ ವಿಚಾರಣೆ ವೇಳೆ ಒಂದೇ ಅರ್ಜಿಯನ್ನು ಕೋರ್ಟ್ ಮುಂದಿಡುವಂತೆಯೂ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ಪೀಠ ಆದೇಶಿಸಿದೆ. ವಿಚಾರಣೆ ಬರುವ ಮಂಗಳವಾರಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.