ಬೆಂಗಳೂರು: ನಗರದ ಮೂರು ಕಡೆಗಳಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು, ಸರಗಳವು ಮಾಡಿದ್ದಾರೆ.
ಮಲೇಶ್ವರದಲ್ಲಿ ರಾತ್ರಿ 9.30 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಸ್ಥಳೀಯ ನಿವಾಸಿ ಸುಧಾ ಅವರ 6 ಗ್ರಾಂ ಚಿನ್ನದ ಸರವನ್ನು ಕಿತ್ತೊಯ್ಯಲಾಗಿದೆ. ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದಿದ್ದ ಆರೋಪಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ವಿಜಯನಗರ ಬಳಿಯ ನಾಗರಬಾವಿ ಮುಖ್ಯರಸ್ತೆಯ ಎಸ್ಪಿಜಿ ನಗರದಲ್ಲಿ ರಾತ್ರಿ 10 ಗಂಟೆಗೆ ಗೌರಿ ಎಂಬುವರನ್ನು ಹಿಂಬಾಲಿಸಿ 55 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಂದ್ರಾಲೇಔಟ್ ಬಳಿಯ ಭೈರವೇಶ್ವರ ನಗರದಲ್ಲಿ ಮಹಿಳೆಯೊಬ್ಬರ 25 ಗ್ರಾಂ ಸರವನ್ನು ಕಿತ್ತೊಯ್ದಿದ್ದಾರೆ. ಸಂಜೆ ಹೊರಗಡೆ ಹೋಗಿದ್ದ ಮಹಿಳೆ ರಾತ್ರಿ 9.15 ಗಂಟೆಗೆ ಆಟೊದಲ್ಲಿ ವಾಪಸ್ ಬಂದಿದ್ದರು. ಆಟೊದಿಂದ ಇಳಿದು ಮನೆಯತ್ತ ಹೊರಟಿದ್ದ ವೇಳೆ ಬೈಕ್ನಲ್ಲಿ ಹಿಂಬಾಲಿಸಿದ್ದ ಆರೋಪಿಗಳು ಕೃತ್ಯ ಎಸಗಿದ್ದಾರೆ.
‘ಸರಗಳವು ಸಂಬಂಧ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.